ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರು ಸೇರ್ಪಡೆಗೊಳಿಸಿರುವುದನ್ನು ವಿಶ್ವಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಆಮಂತ್ರಣ ಪತ್ರಿಕೆಯಿಂದ ಇಬ್ರಾಹಿಂ ಹೆಸರು ತೆಗೆದು ಪುನರ್ ಮುದ್ರಣ ಮಾಡಬೇಕೆಂದು ಆಗ್ರಹಿಸಿವೆ.
ಮೂರ್ತಿ ಪೂಜೆ ಹಾಗೂ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಹಿಂದೂಗಳ ದೇಗುಲದ ಉತ್ಸವಕ್ಕೆ ಆಹ್ವಾನಿಸುವುದು ಕಾನೂನು ಬಾಹಿರ ಹಾಗೂ ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆತರುವ ಸಂಗತಿಯಾಗಿದೆ ಎಂದು ವಿ.ಹಿಂ.ಪ. ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಬಗ್ಗೆ ತಮಗೆ ವೈಯಕ್ತಿಕ ವಿರೋಧ ಇಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಅಧಿನಿಯಮ 1997ರ 7 (1)ರ ವಿಧಿ ಎ.ಬಿ. ಇಬ್ರಾಹಿಂ ಆಮಂತ್ರಣ ನೀಡುವುದು, ಆಡಳಿತ ನಡೆಸುವುದನ್ನು ನಿಷೇಧಿಸುತ್ತದೆ. ಅವರು ಕಾನೂನು ಉಲ್ಲಂಘಿಸಿದ್ದಾರೆ. ಶಿಷ್ಟಾಚಾರ ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯಿಸುತ್ತದೆ. ದುರುದ್ದೇಶ ಪೂರ್ವಕವಾಗಿ ಹಿಂದೂಗಳ ಧಾರ್ಮಿಕ ನಂಬಿಕೆ, ಆಮಂತ್ರಣ ಪತ್ರಿಕೆಯ ಪಾವಿತ್ರ್ಯ ಕೆಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.