ಮಂಗಳೂರು: ಎತ್ತಿನ ಹೊಳೆ ಯೋಜನೆ ಕುರಿತು ರಾಜ್ಯ ಸರಕಾರ ನೀಡುತ್ತಿರುವ ಅಂಕಿ-ಅಂಶ ಗೊಂದಲಗಳಿಂದ ಕೂಡಿದ್ದು, ನಿಖರ ಮಾಹಿತಿ ಸರಕಾರದ ಬಳಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಹೇಳಿದರು.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎತ್ತಿನ ಹೊಳೆ ಯೋಜನೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ಯೋಜನೆ ಬಗ್ಗೆ ವಾಸ್ತವಿಕಾಂಶಗಳನ್ನು ಜನತೆ ಮುಂದಿಡಬೇಕು. ಈ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಆಗಬೇಕು. ತಂತ್ರಜ್ಞರು, ಜನಪ್ರತಿನಿಧಿಗಳು, ಹೋರಾಟಗಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಬೇಕು ಎಂದು ನಾನು ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿದ್ದೇನೆ. ಸರಕಾರ ಬೇಜಾಬ್ದಾರಿ ಧೋರಣೆ ಅನುಸರಿಸುತ್ತಾ ಬಂದಿದೆ. ನೀರಿನ ಮೂಲಗಳ ಬಗ್ಗೆ ವಿಭಿನ್ನ ಅಂಕಿ-ಅಂಶಗಳನ್ನು ನೀಡುತ್ತಾ ಬಂದಿದೆ ಎಂದರು.ಹೀಗಾಗಿ ಸರ್ಕಾರದ ಬಳಿ ಯೋಜನೆ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಹೇಳಿದರು.