ಮುಂಬಯಿ, ಎ.22: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶಿಲಾಮಯ ಮಂದಿರದಲ್ಲಿ ಇಂದಿಲ್ಲಿ ಶುಕ್ರವಾರ ಹನುಮಾನ್ ಜಯಂತಿ ಸಂಭ್ರಮಿಸಲ್ಪಟ್ಟಿತು.
ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ಮಂದಿರದಲ್ಲಿ ಶಾಖೆಯ ಆಡಳಿತಾಧಿಕಾರಿ ರೆಂಜಾಳ ರಾಮದಾಸ ಉಪಾಧ್ಯಾಯ ಅವರು ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರಿಗೆ ಹರಸಿದರು.
ಕಾರ್ಯಕ್ರಮದ ಅಂಗವಾಗಿ ಶುದ್ಧ ಪುಣ್ಯಹ, ಪವಮಾನ ಕಲಶ, ಹವನ, ಪಂಚಾಮೃತ ಅಭಿಷೇಕ, ಪ್ರಧಾನ ಕಲಶಾಭಿಷೇಕ, ಮಹಾಪೂಜೆ ಇತ್ಯಾದಿಗಳನ್ನು ನೆರವೇರಿಸಿ ಹನುಮಾನ್ ಜಯಂತಿ ವಿಧಿವತ್ತಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಪದಾಧಿಕಾರಿ, ಸದಸ್ಯರು, ಶ್ರೀ ಪೇಜಾವರ ಮಠ ಮುಂಬಯಿ ಇದರ ಪ್ರಬಂಧಕರುಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್, ನಿರಂಜನ್ ಗೋಗ್ಟೆ ಮತ್ತು ಪುರೋಹಿತÀರನೇಕರು ಉಪಸ್ಥಿತರಿದ್ದರು.