ಮಂಗಳೂರು: ಮಂಗಳೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸದ್ಯಕ್ಕೆ ನೀರು ದೊರಕುತ್ತಿರುವ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ 7.8 ಅಡಿಗೆ ಕುಸಿದು ಸಾರ್ವಜನಿಕರಲ್ಲಿ ಹಾಗೂ ಪಾಲಿಕೆ ಅಧಿಕಾರಿಗಳಲ್ಲಿ ಆತಂಕದ ಸ್ಥಿತಿ ಮನೆ ಮಾಡುವಂತಾಗಿದೆ. ಈ ಡ್ಯಾಂನ ಗರಿಷ್ಠ ಮಿತಿ 13 ಅಡಿ.ಡ್ಯಾಂನಲ್ಲಿ ಈ ಪ್ರಮಾಣದ ನೀರು ಕಾಣುತ್ತಿದ್ದರೂ ನೀರು ಕಡಿಮೆಯಾಗುವಂತೆ ಕುಡಿಯಲು ಅಯೋಗ್ಯವಾಗಿರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಎಎಂಆರ್ನಲ್ಲೂ ಕೂಡ 32 ಸೆಂ.ಮೀ. ವರೆಗೆ ನೀರಿನ ಪ್ರಮಾಣ ಕುಸಿದಿದ್ದು, ಮಳೆ ಬರುವವರೆಗೆ ನೀರು ಒದಗಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಬಂಟ್ವಾಳ ಪ್ರದೇಶದಲ್ಲಿ ನೇತ್ರಾವತಿ ನದಿಯಲ್ಲಿ ನದಿ ಹರಿಯುತ್ತಿರುವ ಸ್ಥಳದಲ್ಲಿ ಕಲ್ಲುಗಳು ಹಾಗೂ ಹೂಳಿನಿಂದ ಹರಿಯಲಾಗದೆ ಸಂಗ್ರಹವಾಗಿದ್ದ ಅಲ್ಪ ಪ್ರಮಾಣದ ನೀರನ್ನು ಹರಿದು ಸಾಗುವಂತೆ ಮಾಡುವ ಅಡಚಣೆಗಳ ನಿವಾರಣಾ ಕಾರ್ಯಾಚರಣೆಯನ್ನು ಮಂಗಳೂರು ನಗರ ಪಾಲಿಕೆ ಪ್ರಾರಂಭಿಸಿದೆ.