ಮಂಗಳೂರು: ರಾಜ್ಯದಲ್ಲಿ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಮರಳಿನ ಮಧ್ಯೆ ನೀರು ಇದೆಯಾ ಎಂದು ಹುಡುಕುತ್ತಿದ್ದಾರೆ. ಮುಖ್ಯಮಂತ್ರಿ ಸೇರಿದತೆ ಸಚಿವ ಸಂಪುಟವೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ಆದರೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು "ಬರಗಾಲವೇ ಇಲ್ಲ' ಎಂಬ ಹೇಳಿಕೆ ನೀಡುತ್ತಿದ್ದಾರೆ. ಕಣ್ಣಿದ್ದವನಿಗೆ ಬರಗಾಲದ ಸ್ಥಿತಿ ಅರ್ಥವಾಗುತ್ತದೆ. ಎಚ್.ಕೆ. ಪಾಟೀಲರೇ ನಿಮಗೆ ನಾಚಿಕೆ ಆಗುವುದಿಲ್ಲವೇ? ನೀವು ಒಬ್ಬ ಮಂತ್ರಿಯೇ? ಎಂದು ಕಾಂಗ್ರೆಸ್ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯದ ಜನತೆ ಬರಗಾಲದಿಂದ ತತ್ತರಿಸುತ್ತಿದ್ದರೂ ಇದು ಬೇಸಗೆ ಕಾಲ ಎಂದು ಗ್ರಾಮೀಣ ಅಭಿವೃದ್ಧಿ ಸಚಿವರೇ ಹೇಳುವುದಾದರೆ, ಕೇಂದ್ರದಿಂದ ಬರಗಾಲ ಪರಿಹಾರಕ್ಕೆ ಹಣವನ್ನು ಯಾವಮಾನ ದಂಡದಿಂದ ಕೇಳಬೇಕು? ಬೇಸಗೆ ಇಲ್ಲ ವಾದರೆ ಬರಗಾಲ ಬರುತ್ತದಾ? ಬರಗಾಲ ಇಲ್ಲ ಎಂದು ನೀವು ಹೇಳುವುದಾದರೆ ನೀವು ಗ್ರಾಮೀಣ ಭಾಗಕ್ಕೆ ಹೋಗಿಲ್ಲ ಎಂದೇ ಅರ್ಥವಲ್ಲವೇ? ತಪ್ಪಾಗಿ ಈ ಹೇಳಿಕೆ ನೀಡಿದ್ದೇನೆ ಎಂದು ಬಳಿಕ ಕ್ಷಮೆ ಕೇಳುತ್ತಿದ್ದರೆ ಜನ ನಿಮ್ಮ ತಲೆ ಕಡಿಯುತ್ತಿದ್ದರಾ? ಎಚ್.ಕೆ. ಪಾಟೀಲ್ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ. ಪಕ್ಷ ಮುಗಿಸಲು ಹೋಗಬೇಡಿ ಎಂದು ಪೂಜಾರಿ ಹೇಳಿದರು.