ಮುಂಬಯಿ, ಮೇ.15: ಇದೇ ಬರುವ ಮೇ.16 ರಂದು ಸಂಜೆ 3.00 ಗಂಟೆಗೆ ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯುವ ಜಾಥಾದಲ್ಲಿ ಕರಾವಳಿ ಜಿಲ್ಲೆಯ ಜನರು ಸಾಮೂಹಿಕವಾಗಿ ಭಾಗವಹಿಸುವಂತೆ ಜಿಲ್ಲೆಯ ಜನರಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಿನಂತಿಸಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬರಗಾಲದ ಪರಿಸ್ಥಿತಿ, ನೀರಿಗಾಗಿ ಹಾಹಾಕಾರ ಉದ್ಭವಿಸಿದೆ, ಎತ್ತಿನಹೊಳೆ ಯೋಜನೆ ಅಥವಾ ನೇತ್ರಾವತಿ ನದಿಯನ್ನು ತಿರುಗಿಸುವ ಮೊದಲೆ ಈ ಪರಿಸ್ಥಿತಿ ಉದ್ಬವ ಆಗಿದ್ದು, ನೇತ್ರಾವತಿ ನದಿಯನ್ನು ತಿರುಗಿಸಿದ್ದೇ ಆದಲ್ಲಿ ಕರಾವಳಿ ಜಿಲ್ಲೆಯ ಪರಿಸ್ಥಿತಿ ಅತ್ಯಂತ ಗಂಭೀರವಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಜನರು ಒಂದು ತೊಟ್ಟು ನೀರಿಗಾಗಿ ಪರದಾಡುವ ಪರಿಸ್ಥಿತಿ ಬರಬಹುದು ಎಂದು ಅವರು ತಿಳಿಸಿದ್ದಾರೆ.
ನಮ್ಮ ಜಿಲ್ಲೆಯ ಜನರ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ. ಆದುದರಿಂದ ನಾವೆಲ್ಲರೂ ಈ ಯೋಜನೆಯ ವಿರುದ್ಧ ಕಾರ್ಯಪ್ರವೃತ್ತ ರಾಗೋಣ. ಈ ಹಿನ್ನೆಲೆಯಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯು ನಡೆಸಲಿರುವ ಜಾಥಾಕ್ಕೆ ಮತ್ತು ಅನಂತರ ನಡೆಯುವ ಎತ್ತಿನ ಹೊಳೆ ಯೋಜನೆ ಅಥವಾ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ದದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಸಮಾಜ ಬಾಂಧವರು ಹಾಗೂ ಜಿಲ್ಲೆಯ ಜನತೆ ಪಕ್ಷ, ಧರ್ಮ, ಜಾತಿ ಮತವನ್ನು ಮೀರಿ ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ರೈ ವಿನಂತಿಸಿದ್ದಾರೆ.