ಮುಂಬಯಿ, ಮೇ.16: ಶ್ರೀ ಜಯರಾಮ ಫಿಲ್ಮ್ ಲಾಂಛನದಲ್ಲಿ ಟಿತ್ರ ನಿರ್ಮಾಪಕ ಡಾ| ಸಂಜೀವ ದಂಡೆಕೇರಿ ಅವರ `ಬಯ್ಯಮಲ್ಲಿಗೆ' ದಾಖಲೆ ಪ್ರದರ್ಶನ ಕಂಡ ತುಳುನಾಟಕದ ಟೆಲಿಫಿಲ್ಮ್ಅನ್ನು ನಗರದ ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಟೆಲಿಫಿಲ್ಮ್ ಬಿಡುಗಡೆಗೊಳಿಸಿದರು. `ಬಯ್ಯಮಲ್ಲಿಗೆ' ನಾಟಕದಲ್ಲಿ ತಾನು ನಿರ್ವಹಿಸಿದ ವಿವಿಧ ಪಾತ್ರಗಳನ್ನು ಮೆಲುಕು ಹಾಕಿದ ಅವರು, `ಬಯ್ಯಮಲ್ಲಿಗೆ ನಾಟಕ 28 ಸಾವಿರ ಪ್ರದರ್ಶನ ಕಂಡಿದೆ. ಅದರಲ್ಲಿ 25 ದೃಶ್ಯಗಳಿದ್ದು, 13 ಪಾತ್ರಗಳಿವೆ. 50 ವರ್ಷದ ಹಿಂದೆ ರಚಿಸಿದ ಈ ನಾಟಕ ಈಗಲೂ ಜನ ಪ್ರಿಯವಾಗಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹರಿನಾಥ್ ಡಿವಿಡಿ ಬಿಡುಗಡೆಗೊಳಿಸಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ಸಮಾರಂಭವನ್ನು ಉದ್ಘಾಟಿಸಿದರು. ಬಯ್ಯಮಲ್ಲಿಗೆ ನಾಟಕ ತುಳುರಂಗಭೂಮಿಯಲ್ಲಿ ಹೊಸದಾಖಲೆ ಬರೆದಿದೆ ಎಂದು ತಿಳಿಸಿದ ಅವರು ನೇತ್ರಾವತಿ ನದಿ ನೀರನ್ನು ಬರಿದು ಮಾಡುವ ಎತ್ತಿನಹೊಳೆ ಯೋಜನೆಯನ್ನು ಕಲಾವಿದರು ವಿರೋಧಿಸಬೇಕು ಎಂದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಯ್ಯಮಲ್ಲಿಗೆ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದರನ್ನು ಮತ್ತು ಕಿರುತೆರೆ ಕಲಾವಿದರಾದ ಜ್ಯೋತಿ ರೈ ಮತ್ತು ದಿಶಾರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿüಯಾಗಿ ಆಗಮಿಸಿದ್ದ ಕಾಸರಗೋಡು ಚಿನ್ನಾ, ಪತ್ರಕರ್ತ ಮನೋಹರ್ ಪ್ರಸಾದ್ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಶುಭ ಹಾರೈಸಿದರು. ಡಾ.ಸಂಜೀವ ದಂಡೆಕೇರಿ ಪ್ರಾಸ್ತಾವಿಕದಲ್ಲಿ 50 ವರ್ಷದ ಹಿಂದಿನ ಈ ನಾಟಕ ಈಗಲೂ ಪ್ರಸ್ತುತವಾಗಿದೆ. ಈ ನಾಟಕ ಐದು ಭಾಷೆಗಳಿಗೆ ಅನುವಾದಗೊಂಡಿದೆ. ಈ ಕಿರುಚಿತ್ರ 12 ದಿನಗಳಲ್ಲಿ ಶೂಟಿಂಗ್ ನಡೆಸಿದ್ದು 1.50 ಗಂಟೆಯ ಡಿ.ವಿ.ಡಿ ತಯಾರಿಸಲಾಗಿದೆ ಎಂದರು. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಕೃಷ್ಣ ಕೋಟ್ಯಾನ್ ಉಪಸ್ಥಿತರಿದ್ದರು. ವಿ.ಜಿ.ಪಾಲ್ ಕಾರ್ಯಕ್ರಮ ನಿರ್ವಹಿಸಿದರು.