ಮಂಗಳೂರು: ಬಿಜೆಪಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಸದನದಲ್ಲಿ ನಿಲುವಳಿ ಮಂಡಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಪ್ಪಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.ಮಂಗಳೂರಿನ ಸರ್ಕಿಟ್ಹೌಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎತ್ತಿನಹೊಳೆ ಯೋಜನೆ ವಿಚಾರವಾಗಿ ಈ ಹಿಂದೆ ಸದನದಲ್ಲಿ ಒಪ್ಪಿಗೆ ನೀಡಿದ ಮುಖಂಡರು ಈಗ ಅದರ ವಿರುದ್ಧ ಮಾತನಾಡುತ್ತಿದ್ದಾರೆ. ಮೈಲೇಜ್ಗಾಗಿ ಮಾತನಾಡುವ ಮನುಷ್ಯ ನಾನಲ್ಲ.
ಬಿಜೆಪಿ ಸದನದಲ್ಲಿ ಮೊದಲು ನಿಲುವಳಿ ಮಂಡಿಸುವ ಕೆಲಸ ಮಾಡಲಿ ಎಂದರು.ಎತ್ತಿನಹೊಳೆ ಯೋಜನೆ ಸಾಧಕ ಬಾಧಕಗಳ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲು ನಾನು ಸಿದ್ಧನಿದ್ದೇನೆ.ಚರ್ಚೆಗೆ ಯೋಜನೆ ವಿರೋಧಿ ಹೋರಾಟಗಾರರೇ ದಿನಾಂಕ ನಿಗದಿಪಡಿಸಲಿ ಎಂದು ಮುಖ್ಯಮಂತ್ರಿ ಇತ್ತೀಚೆಗೆ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಆದರೆ ಹೋರಾಟಗಾರರು ದಿನಾಂಕ ನಿಗದಿಪಡಿಸಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು. ದ.ಕ. ಜಿಲ್ಲೆಯಲ್ಲಿ ಉಂಟಾಗಿರುವ ಅತಿಯಾದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗಿದೆ. ಕಳೆದ ವರ್ಷ ಶೇ. 21ರಷ್ಟು ಮಳೆಯ ಪ್ರಮಾಣ ಕಡಿಮೆ ಆಗಿರುವುದೂ ಸಮಸ್ಯೆ ಎದುರಾಗಲು ಕಾರಣ ಎಂದು ಅವರು ತಿಳಿಸಿದರು.