ಮಂಗಳೂರು: ಮಂಗಳೂರಿನ ವಸತಿ ಗೃಹವೊಂದರಲ್ಲಿ ವ್ಯಕ್ತಿಯೋರ್ವ ಕನ್ನಡಿ ಚೂರಿನಿಂದ ಕತ್ತನ್ನು ಸೀಳಿಕೊಂಡ ಆತ್ಮಹತ್ಯೆಗೈದ ಭೀಕರ ಘಟನೆ ಆದಿತ್ಯವಾರ ಬೆಳಕಿಗೆ ಬಂದಿದೆ. ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೈದ ವ್ಯಕ್ತಿಯನ್ನು ಶಂಭು ಜಿ.ಎಸ್ ಎಂದು ಗುರುತಿಸಲಾಗಿದೆ. ಕಳೆದೆರಡು ದಿನಗಳಿಂದ ವಸತಿಗೃಹಕ್ಕೆ ಬಂದು ತಂಗಿದ್ದ ಶಂಭು ದಾವಣಗೆರೆಯ ವಿಳಾಸ ನೀಡಿದ್ದ ಎಂದು ವಸತಿಗೃಹದ ಮ್ಯಾನೇಜರ್ ಪೊಲೀಸರಿಗೆ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಹೊರಗೆ ಹೋಗಿ ಬಂದಾತ ಮತ್ತೆ ಹೊರಗೆ ಹೋಗದೆ ಇದ್ದ ಬಗ್ಗೆ ಸಂಶಯಗೊಂಡ ಇವರು ಉತ್ತರ ಠಾಣೆಗೆ ದೂರು ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೋಣೆಯ ಬಾಗಿಲನ್ನು ಮುರಿದು ನೋಡಿದಾಗ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದು ಕಂಡು ಬಂದಿದೆ. ಮೃತದೇಹ ನೋಡಿದಾಗ ಇದು ಕೊಲೆಯೆಂದು ಶಂಕಿಸಲಾಗಿತ್ತು. ಬಳಿಕ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಕೂಲಂಕುಷವಾಗಿ ಪರಿಶೀಲಿಸಿದಾಗ ಇದು ಆತ್ಮಹತ್ಯೆಯೆಂದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.