ಮುಂಬಯಿ, ಜೂ.07: ಡಿಸೆಂಬರ್ 9 ರಿಂದ 13 ರ ತನಕ ಬದಿಯಡ್ಕದಲ್ಲಿ ಜರಗಲಿರುವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮಕ್ಕೆ ಕಾಸರಗೋಡು ವಲಯ ಧರ್ಮಗುರು ಬೇಳ ಇಗರ್ಜಿಯ ಫಾದರ್ ವಿನ್ಸೆಂಟ್ ಡಿ'ಸೋಜ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ತುಳುವೆರೆ ಆಯನೊ ಕೂಟದ ಸದಸ್ಯರು ಇಗರ್ಜಿಗೆ ಭೇಟಿನೀಡಿದ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ ಧರ್ಮಗುರುಗಳು ಬಳಿಕ ಮಾತನಾಡುತ್ತಾ ತುಳುನಾಡಿನ ವಿವಿಧ ಜಾತಿ ಮತಸ್ಥರನ್ನು ಗುರುತಿಸಿ ಒಂದೇ ವೇದಿಕೆಯಡಿ ತರುವ ಈ ಮಹತ್ತರದ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು. ತುಳುವೆರೆ ಅಯನೊದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೆ ಹಾಗೂ ಬಹುಭಾಷಾ ಸಂಗಮಕ್ಕೆ ಕೊಂಕಣಿ ಭಾಷಿಗರಾದ ಕ್ರೈಸ್ತರ ಪೂರ್ಣ ಬೆಂಬಲ ದೊರಕಿ ಅಭೂತಪೂರ್ವವಾಗಿ ಮೂಡಿ ಬರುವಂತೆ ಸಹಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ| ಶ್ರೀನಾಥ್ ಕಾಸರಗೋಡು, ಡಾ. ರಾಜೇಶ್ ಆಳ್ವ ಬದಿಯಡ್ಕ, ರವಿ ಕುಮಾರ್, ಪುರುಷೋತ್ತಮ ಭಟ್, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಕೃಷ್ಣ ಡಿ ಬೆಳಿಂಜ, ನಿರಂಜನ ರೈ ಪೆರಡಾಲ, ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.