ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಬಯೋಮೆಟ್ರಿಕ್ ಗುರುತಿನ ಚೀಟಿ ಹೊಂದುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದ ಬಂದರು, ಕಡಲ ಕಿನಾರೆಗಳಲ್ಲಿ ಶಿಬಿರ ನಡೆಸಿ ಗುರುತಿನ ಚೀಟಿ ವಿತರಿಸಲು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ.ಮೀನುಗಾರಿಕೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಮೀನುಗಾರರ ಸಮಸ್ಯೆಗಳ ಕುರಿತ ಸಭೆಯಲ್ಲಿ ಕರ್ನಾಟಕ ಮೀನುಗಾರಿಕೆ ಇಲಾಖೆ ನಿರ್ದೇಶಕ ಎಚ್.ಎಸ್. ವೀರಪ್ಪ ಗೌಡ ಈ ವಿಷಯ ತಿಳಿಸಿದರು.ಮುಂಬಯಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಅನಂತರ ಸುರಕ್ಷತೆಯ ಬಗ್ಗೆ ಕರಾವಳಿ ಪಡೆ ಗಂಭೀರವಾಗಿದ್ದು, ಈ ನಿಟ್ಟಿನಲ್ಲಿ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ. ಜೂ. 20ರಿಂದ 30ರ ವರೆಗೆ ಇಲ್ಲಿನ ಬಂದರು, ಸಮುದ್ರ ಕಿನಾರೆಗಳಲ್ಲಿ ಶಿಬಿರ ಏರ್ಪಡಿಸಿ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು.
ಮೀನುಗಾರರ ವೇಷದಲ್ಲಿ ಭಯೋತ್ಪಾದಕರು ಸಮುದ್ರದ ಮೂಲಕ ಪ್ರವೇಶಿಸಿ ದೇಶದಲ್ಲಿ ಆತಂಕ ಸೃಷ್ಠಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಮೀನುಗಾರರು ಎಚ್ಚರ ವಹಿಸಬೇಕು. ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಎಲ್ಲ ಮೀನಗಾರರು ಬಯೋಮೆಟ್ರಿಕ್ ಕಾರ್ಡ್ ಹೊಂದಿರುವುದನ್ನು ಸಂಬಂಧಪಟ್ಟ ದೋಣಿಗಳ ಮಾಲಕರು ಖಾತರಿಪಡಿಸಿಕೊಳ್ಳಬೇಕು ಎಂದರು.