ಮಂಗಳೂರು: ಕಂದಾಯ, ಅರಣ್ಯ, ಪೊಲೀಸ್ ಇಲಾಖೆಗಳ ಜಂಟಿ ನೇತೃತ್ವದಲ್ಲಿ ಮರಳು ಸಾಗಾಟದ ವಾಹನಗಳನ್ನು ರವಿವಾರ ಹಾಗೂ ಸೋಮವಾರ ಮೂಡಬಿದ್ರೆಯ ಸ್ವರಾಜ್ಯ ಮೈದಾನ ಹಾಗೂ ಬನ್ನಡ್ಕದಲ್ಲಿ ತಪಾಸಣೆ ನಡೆಸಿದ್ದು ಈ ಎರಡು ದಿನಗಳಲ್ಲಿ ಒಟ್ಟು 10 ಲಾರಿಗಳನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಲಾಗಿದೆ.
ಈ ಲಾರಿಗಳಲ್ಲಿರುವ ಮರಳಿಗೆ ಸಂಬಂಧಿಸಿದಂತೆ ಮರಳು ಸಾಗಾಣಿಕೆ ಪರವಾನಿಗೆ ಪತ್ರವಿದ್ದರೂ ಅವುಗಳ ನೈಜತೆಯ ಬಗ್ಗೆ ಅಧಿಕಾರಿಗಳಿಗೆ ಸಂಶಯ ಕಂಡು ಬಂದಿರುವುದರಿಂದ ಅವುಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವಿವರ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ವಶಪಡಿಸಿಕೊಂಡ ಲಾರಿಗಳನ್ನು ಮೂಡಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.