ಮಂಗಳೂರು: ಖಾಸಗಿ ವಾಹನ ಸಹಿತ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಹಳದಿ ಬಣ್ಣ ಕಡ್ಡಾಯ ಹಾಗೂ ಜೂ. 30ರೊಳಗೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲ ವಾಹನಗಳಿಗೆ ಹಳದಿ ಬಣ್ಣವನ್ನು ಬಳಿಯಬೇಕು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಕುಂದಾಪುರದ ತ್ರಾಸಿಯಲ್ಲಿ ಶಾಲಾ ಮಕ್ಕಳ ವಾಹನ ಮತ್ತು ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಮಂದಿ ಮಕ್ಕಳು ಸಾವನ್ನಪ್ಪಿದ ದುರಂತದ ಹಿನ್ನೆಲೆಯಲ್ಲಿ ಶಾಲಾ ವಾಹನಗಳ ಸುರಕ್ಷತೆ ಕುರಿತಂತೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತಾನಾಡಿದರು.ಶಾಲಾ ವಾಹನಗಳಲ್ಲಿ
ಓವರ್ ಲೋಡ್ನ್ನು ನಿಯಂತ್ರಿಸಲೇಬೇಕಾಗಿದೆ.
ಈ ನಿಟ್ಟಿನಲ್ಲಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಮಿತಿ ಮೀರಿ ತುಂಬಿಸಿ ಸಾಗಿಸುತ್ತಿರುವ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜರಗಿಸಲಾಗುವುದು. 12 ವರ್ಷದ ಒಳಗಿನ ಮಕ್ಕಳನ್ನು ಆಟೋ ರಿಕ್ಷಾದಲ್ಲಿ 6 ಮಂದಿಯನ್ನು ಹಾಗೂ ಆಮ್ನಿ ವಾಹನದಲ್ಲಿ 8 ಮಂದಿಯನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. 12 ವರ್ಷಕ್ಕಿಂತ ಮೇಲಿನ ಮಕ್ಕಳನ್ನು ವಾಹನದ ಸೀಟುಗಳ ಸಾಮರ್ಥ್ಯದಷ್ಟೇ ಕರೆದೊಯ್ಯ ಬೇಕು. ಅದಕ್ಕಿಂತ ಜಾಸ್ತಿ ಮಕ್ಕಳನ್ನು ಸಾಗಿಸಿದರೆ ವಾಹನದ ಮತ್ತು ಚಾಲಕನ ಚಾಲನಾ ಪರವಾನಿಗೆ ರದ್ದತಿಯಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.ಹಳದಿ ಬಣ್ಣ ಬಳಿಯುವ ಜತೆಗೆ ಸೂಕ್ತ ಪರವಾನಿಗೆ, ವಾಹನದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್, ಕಿಟಿಕಿಗಳಿಗೆ ಗ್ರಿಲ್ಗಳ ಅಳವಡಿಕೆ, ವಾಹನದ ಮುಂಭಾಗ ಮತ್ತು ಹಿಂಬದಿ "ಸ್ಕೂಲ್ ಡ್ನೂಟಿ ಮೇಲೆ' ಒಕ್ಕಣೆ, ಸ್ಪೀಡ್ ಗವರ್ನರ್, ಅಗ್ನಿ ಶಾಮಕ ವ್ಯವಸ್ಥೆ, ವಾಹನದ ಬಾಗಿಲಿಗೆ ವಿಶ್ವಾಸಾರ್ಹವಾದ ಬೀಗ ಅಳವಡಿಸಬೇಕು ಎಂದು ಅವರು ತಿಳಿಸಿದರು.