ಮಂಗಳೂರು: ಬಿಜೆಪಿ ಮತ್ತು ಕೇಂದ್ರ ಸರಕಾರದ ಉದ್ದೇಶಿತ ಏಕರೂಪದ ನಾಗರಿಕ ಸಂಹಿತೆ ಮಸೂದೆ ಜಾರಿಗೆ ಬಂದರೆ ದೇಶ ಚೂರು ಚೂರಾಗಲಿದೆ. ಆದ್ದರಿಂದ ಇದನ್ನು ಕಾಂಗ್ರೆಸ್ ಪಕ್ಷವು ಖಂಡಾತುಂಡವಾಗಿ ವಿರೋಧಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸಹಿತ 5 ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಸರಕಾರ ಈ ಮಸೂದೆಯನ್ನು ತರುತ್ತಿದೆ; ಇದು ವೋಟ್ ಬ್ಯಾಂಕ್ ರಾಜಕಾರಣ ಎಂದವರು ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.ಭಾರತದಲ್ಲಿ ಹಲವಾರು ಜಾತಿ, ಧರ್ಮಗಳಿವೆ. ಎಲ್ಲ ಧರ್ಮಗಳಿಗೂ ಅವುಗಳದ್ದೇ ಆದ ಆಚಾರ ವಿಚಾರಗಳಿವೆ.
ಗುಡ್ಡಗಾಡು ಜನರಲ್ಲಿ ಪ್ರತ್ಯೇಕ ಆಚರಣೆಗಳಿವೆ. ಹಾಗಿರುವಾಗ ಸಮಾನ ನಾಗರಿಕ ಸಂಹಿತೆ ತರುವುದು ಎಷ್ಟು ಸರಿ? ಕಾಂಗ್ರೆಸ್ ಪಕ್ಷವು ಕಳೆದ 50 ವರ್ಷಗಳಿಂದ ಸಮಾನ ನಾಗರಿಕ ಸಂಹಿತೆ ಅನಗತ್ಯ ಎಂದು ವಾದಿಸಿ ವಿರೋಧಿಸುತ್ತಾ ಬಂದಿದೆ ಎಂದವರು ವಿವರಿಸಿದರು.