ಮುಂಬಯಿ (ಹೆಬ್ರಿ), ಜು.06: ಪಟ್ಲ ಅಭಿಮಾನಿ ಬಳಗ ಹೆಬ್ರಿ ಅರ್ಪಿಸುವ ದಕ್ಷಿಣೋತ್ತರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಮಳೆಗಾಲದ ಪ್ರಥಮ ಹಗಲು ಯಕ್ಷಗಾನ ಪಟ್ಲ-ನಗರ ಯಕ್ಷ ವೈಭವ, ಯಕ್ಷ ಗಾಯನ, ಯಕ್ಷ ನೃತ್ಯ ಮತ್ತು ಸುಭದ್ರ ಕಲ್ಯಾಣ ಬಡಗು ಯಕ್ಷಗಾನ ಕಾರ್ಯಕ್ರಮ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಭಾನುವಾರ ನಡೆಯಿತು.
ಯಕ್ಷ ಕಲಾ ಸಂಘಟಕ ಹೆಬ್ರಿ ರವೀಂದ್ರ ಪುರೋಹಿತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಪಟ್ಲ ಸತೀಶ ಶೆಟ್ಟಿ ಮತ್ತು ಸಂಜಯ್ ಕುಮಾರ್ ಗೋಣಿ ಬೀಡು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ ಪುರೋಹಿತ್ ಬಂಟ್ವಾಳ, ವಿಶ್ವ ಕರ್ಮ ಸಮುದಾಯದ ಮುಖಂಡ ಎಚ್. ರಮೇಶ ಆಚಾರ್ಯ, ಹೆಬ್ರಿ ಟಿ.ಜಿ.ಆಚಾರ್ಯ, ಹೆಬ್ರಿ ಪಾಂಚಜನ್ಯ ಯಕ್ಷ ಕಲಾ ಪ್ರತಿಷ್ಠಾನದ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಟಿ.ಜಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಪ್ರಶಾಂತ ಆಚಾರ್ಯ ವಂದಿಸಿದರು.