ಮಂಗಳೂರು: ಸರ್ವ ಋತು ಮೀನುಗಾರಿಕಾ ಬಂದರು ನಿರ್ಮಾಣ ಕುರಿತು ರಾಜ್ಯ ಸರಕಾರ ಬಾಕಿಯಿರಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದಲ್ಲಿ ಕೇಂದ್ರ ಸಚಿವರಲ್ಲಿ ಈ ಬಗ್ಗೆ ಚರ್ಚಿಸಿ 15 ದಿವಸಗಳಲ್ಲಿ ಅನುಷ್ಠಾನಗೊಳಿಸಲು ಪೂರ್ಣ ಪ್ರಯತ್ನ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಋತು ಮೀನುಗಾರಿಕಾ ಬಂದರು ನಿರ್ಮಾಣ, 400 ಲೀ. ಸೀಮೆಎಣ್ಣೆ ವಿತರಣೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ನಾಡದೋಣಿ ಮೀನುಗಾರರ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಏರ್ಪಡಿಸಲಾದ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು.
ಮೀನುಗಾರಿಕಾ ಸಚಿವರು ಕರಾವಳಿಯ ಮೀನುಗಾರರ ಸಮಸ್ಯೆ ಆಲಿಸಬೇಕಾಗಿದೆ. ಜೆಟ್ಟಿ ನಿರ್ಮಾಣ, ಸಿಆರ್ಝಡ್ ಸಮಸ್ಯೆ, ಸೀಮೆ ಎಣ್ಣೆ ಸಬ್ಸಿಡಿ ಕುರಿತ ಮನವಿಗಳನ್ನು ಲೋಕಸಭೆಯಲ್ಲಿ ಮಂಡಿಸಲು ಸಿದ್ದನಿದ್ದೇನೆ. ರಾಜ್ಯ ಸರಕಾರವೂ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸುತ್ತೇನೆ. ಅಧಿಕಾರವೆಂದೂ ಶಾಶ್ವತವಲ್ಲ. ಮೀನುಗಾರರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸ ಬೇಕಾಗಿದೆ. ರಾಜ್ಯ ಸರಕಾರ ಸಮಸ್ಯೆ ಪರಿಹರಿಸದಿದ್ದರೂ ಕೇಂದ್ರ ಸರಕಾರದಿಂದ ಮೀನುಗಾರರಿಗೆ ಸೌಲಭ್ಯ ದೊರೆಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.