ಮಂಗಳೂರು: ಟ್ಯಾಂಕರ್ಗಳಿಗೆ ರಾಷ್ಟ್ರೀಯ ಹೆದ್ದಾರಿ ಬಳಿ ನಿಲುಗಡೆಗಾಗಿ 3 ತಾಣಗಳನ್ನು ಒದಗಿಸುವ ಪ್ರಸ್ತಾವನೆ ಇದ್ದು ಇದರಲ್ಲಿ ಆರಂಭಿಕವಾಗಿ ನೆಲ್ಯಾಡಿ ಸಮೀಪದ ಗೋಳಿತೊಟ್ಟುವಿನಲ್ಲಿ 3 ಎಕ್ರೆ ಜಾಗ ಗುರುತಿಸಲಾಗಿದೆ.
ಎಲ್ಪಿಜಿ ಟ್ಯಾಂಕರ್ಗಳ ಸಂಚಾರದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜರಗಿದ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು. ಹೆದ್ದಾರಿ ಪಕ್ಕದಲ್ಲಿ ಇನ್ನೆರಡು ತಾಣಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಅಪಘಾತಗಳಾದ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆಗೆ 2 ಕ್ರೆನ್ಗಳನ್ನು ನಿಯೋಜನೆ ಮಾಡಲು ನಿರ್ಧರಿಸಲಾಗಿದೆ. ಉಪ್ಪಿನಂಗಡಿಯಲ್ಲಿ ತೈಲ ಕಂಪೆನಿಗಳ ಸಹಯೋಗದಲ್ಲಿ ತುರ್ತು ಸ್ಪಂದನಾ ಪಡೆ ನಿಯೋಜನೆ ಕುರಿತಂತೆ ಈಗಾಗಲೇ ಪೂರಕ ಕ್ರಮಗಳು ಆಗಿವೆ.
ಟ್ಯಾಂಕರ್ಗಳಿಗೆ ಜಿಪಿಎಸ್ ನಿಗಾ ವ್ಯವಸ್ಥೆ ಹಾಗೂ ಸ್ಪೀಡ್ ಗವರ್ನರ್ ಬಗ್ಗೆಯೂ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೋರಸೆ ವಿವರಿಸಿದರು.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಜಿ. ಹೆಗಡೆ, ಎಚ್ಪಿಸಿಎಲ್, ಬಿಪಿಸಿಎಲ್, ಐಒಸಿಎಲ್ ಮುಂತಾದ ಕಂಪೆನಿಗಳ ಅಧಿಕಾರಿಗಳು, ಅಗ್ನಿಶಾಮಕದಳದ ಅಧಿಕಾರಿಗಳು ಉಪಸ್ಥಿತರಿದ್ದರು.