ಮುಂಬಯಿ (ಕೃಷ್ಣರಾಜಪೇಟೆ), ಜು.15: ಕೆ.ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾರ್ಗೋನಹಳ್ಳಿ ಬಳಿಯಿರುವ ಶ್ರೀ ಕ್ಷೇತ್ರ ಮರಡಿಲಿಂಗೇಶ್ವರ ದೇವಸ್ಥಾನದ ಬಳಿ ಹಾದು ಹೋಗಿರುವ ಹೇಮಾವತಿ ಭಾರತೀಪುರ 55 ನೇ ವಿತರಣಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯು ಸಂಪೂರ್ಣವಾಗಿ ಮುರಿದು ಬಿದ್ದಿದ್ದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ನಗರೂರು, ಮಾರ್ಗೋನಹಳ್ಳಿ, ಚಿಲ್ಲದಹಳ್ಳಿ ಹಾಗೂ ಅಗ್ರಹಾರಬಾಚಹಳ್ಳಿ ಗ್ರಾಮಗಳಿಗೆ ಈ ಸೇತುವೆಯ ಮೂಲಕ ಹೋಗಬೇಕಾಗಿತ್ತು. ಸೇತುವೆಯ ಮೂಲಕ ರಸ್ತೆ ನಿರ್ಮಾಣ ಮಾಡಲಾಗಿದೆ ಸೇತುವೆ ಮುರಿದು ಬಿದ್ದಿದ್ದರಿಂದ ಈ ಮೂರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಶ್ರೀ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶ್ರೀ ಕ್ಷೇತ್ರದ ಭಕ್ತರು ನಾಡಿನಾಧ್ಯಂತ ಇದ್ದು, ಕೆ.ಆರ್.ಪೇಟೆ ಹಾಗೂ ಶ್ರವಣಬೆಳಗೊಳ ಮಾರ್ಗವಾಗಿ ಶ್ರೀ ಮರಡಿಲಿಂಗೇಶ್ವರ ಬಸ್ ನಿಲ್ದಾಣದಲ್ಲಿ ಇಳಿದು ಕ್ಷೇತ್ರಕ್ಕೆ ಬರುತ್ತಿದ್ದರು. ಖಾಸಗಿ ವಾಹನಗಳೂ ಕೂಡ ಇದೇ ಮಾರ್ಗವಾಗಿ ಬರಬೇಕಿದೆ. ಕ್ಷೇತ್ರಕ್ಕೆ ಬರಲು ಹತ್ತಾರು ಕಿ.ಮೀ ಬಳಸಿಕೊಂಡ ಬರಬೆಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನೀರಾವರಿ ನಿಗಮದ ಹೇಮಾವತಿ ನಂ.20 ಉಪ ವಿಭಾಗಕ್ಕೆ ಕಾಲುವೆಯು ಸೇರಿದ್ದು, ಭಾರತೀಪುರ ವಿತರಣಾ ನಾಲೆಯಿಂದ ಸುಮಾರು 9 ಕಿ.ಮೀ ಅಂತರದಲ್ಲಿದೆ. ತುರ್ತಾಗಿ ದುರಸ್ಥಿ ಕಾರ್ಯವನ್ನು ಮಾಡುವ ಮೂಲಕ ಸಾವಿರಾರು ಭಕ್ತರ ಹಾಗೂ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನಾಗರೀಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆ ಭಾಗದ ನಾಗರೀಕರು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.
ಸೇತುವೆಯು ಸಂಪೂರ್ಣವಾಗಿ ಮುರಿದು ಬಿದ್ದಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಆ ಭಾಗದ ಇಂಜಿನಿಯರ್ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ದುರಸ್ಥಿ ಕಾರ್ಯ ಮಾಡಲು ತುರ್ತಾಗಿ ಅನುದಾನ ಬಿಡುಗಡೆ ಮಾಡುವಂತೆ ಅಧೀಕ್ಷಕ ಇಂಜಿನಿಯರ್ ಅವರಿಗೆ ಪತ್ರ ಬರೆಯಲಾಗಿದೆ. ಸಾರ್ವನಿಕರ ಸಂಚಾರಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗುವುದು ಎಂದು ನಂ.20, ಹೇಮಾವತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನೀಲೇಗೌಡ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.