ಮಂಗಳೂರು: ಮೂಢನಂಬಿಕೆಗಳ ನಿಷೇಧಕ್ಕೆ ರಾಜ್ಯ ಸರಕಾರ ರೂಪಿಸಿರುವ ಕಾಯ್ದೆ ಜಾರಿಗೆ ಬರುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಸಚಿವರು ಹಾಗೂ ಶಾಸಕರು ಪೂರ್ಣ ಸಹಕಾರ ನೀಡಬೇಕು ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
ಕಾಂಗ್ರೆಸ್ನ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬ್ಲಾಕ್ ಮಟ್ಟದ ಪ್ರತಿನಿಧಿಗಳ ಸಮಾವೇಶವನ್ನು ಮಂಗಳೂರಿನ ಪುರಭವನದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಕರ್ನಾಟಕ ನರಬಲಿ, ಇತರ ಅಮಾನವೀಯ ಮತ್ತು ಅಘೋರಿ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನೆ ಮಸೂದೆ-2016ನ್ನು ಉಲ್ಲೇಖೀಸಿದ ಅವರು ಬೆತ್ತಲೆ ಸೇವೆ, ನರಬಲಿ ಸೇರಿದಂತೆ ಸಮಾಜಕ್ಕೆ ಮಾರಕವಾಗಿರುವ ಅನಿಷ್ಟ ಪದ್ಧತಿಗಳು ನಿರ್ಮೂಲನೆ ಆಗಲೇ ಬೇಕು. ಇದಕ್ಕೆ ವಿರೋಧ ಪಕ್ಷಗಳಿಂದಲೂ ವಿರೋಧ ಬಾರದು. ಎಲ್ಲರನ್ನು ಹೊಂದಾಣಿಕೆ ಮಾಡಿಕೊಂಡು ಈ ಮಸೂದೆ ಜಾರಿಯಾಗಲು ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.