ಮಂಗಳೂರು: ಎಂ.ಆರ್.ಪಿ.ಎಲ್. ಕಂಪೆನಿಯ 4ನೇ ಹಂತದ ವಿಸ್ತರಣಾ ಯೋಜನೆಗೆ 1,050 ಎಕರೆ ಭೂಮಿ ಒದಗಿಸಲು ರಾಜ್ಯ ಸರಕಾರದ ಉನ್ನತ ಮಟ್ಟದ ಅನುಮೋದನ ಸಮಿತಿ (ಎಸ್ಎಚ್ಎಲ್ಸಿಸಿ) ಮಂಜೂರಾತಿ ನೀಡಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ ಎಂದು ಎಂ.ಆರ್.ಪಿ.ಎಲ್. ಅಧ್ಯಕ್ಷ ಎಚ್. ಕುಮಾರ್ ತಿಳಿಸಿದರು.
ಹೊಸ ಸೌಲಭ್ಯಗಳ ನಿರ್ಮಾಣ, ಶೇ. 33 ಭಾಗದಲ್ಲಿ ಹಸಿರುವನ ಅಭಿವೃದ್ಧಿ ಹಾಗೂ ಪುನರ್ವಸತಿ ಸೌಕರ್ಯವನ್ನು ಈ 1,050 ಎಕರೆ ಪ್ರದೇಶದಲ್ಲಿ ಕಲ್ಪಿಸಲಾಗುವುದು ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ರಿಫೈನರಿಯ ಉತ್ತರ ಭಾಗದಲ್ಲಿರುವ ಕುತ್ತೆತ್ತೂರು ಮತ್ತು ಪೆರ್ಮುದೆ ಗ್ರಾಮಗಳ 850 ಎಕರೆ ಭೂಮಿಯನ್ನು ಹೊಸ ಸೌಲಭ್ಯ ಕಲ್ಪಿಸಲು ಹಾಗೂ ಬಾಕಿ ಉಳಿದ ಮೂಳೂರು ಮತ್ತು ಕಂದಾವರ ಗ್ರಾಮಗಳಲ್ಲಿನ ಭೂಮಿಯನ್ನು ಪುನರ್ವಸತಿ ಉದ್ದೇಶಕ್ಕಾಗಿ ವಿನಿಯೋಗಿಸಲಾಗುವುದು ಎಂದು ಅವರು ವಿವರಿಸಿದರು.