ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳ ಕೊಠಡಿಗಳಿಗೆ ರವಿವಾರ ಬೆಳಗ್ಗೆ ಪೊಲೀಸರು ಮತ್ತು ಜೈಲು ಅಧಿಕಾರಿಗಳು/ ಸಿಬಂದಿ ದಿಢೀರ್ ಭೇಟಿ ನೀಟಿ ತಪಾಸಣೆ ನಡೆಸಿದ್ದು, ಕೈದಿಗಳ ಕೊಠಡಿಗಳಿಂದ 2 ಮೊಬೈಲ್ ಫೋನ್ಗಳನ್ನು ಮತ್ತು 2 ಸಿಮ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ವಶ ಪಡಿಸಿಕೊಂಡಿದ್ದಾರೆ.
ಡಿಸಿಪಿಗಳಾದ ಶಾಂತರಾಜು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಡಾ | ಸಂಜೀವ್ ಪಾಟೀಲ್ (ಅಪರಾಧ), 4 ಮಂದಿ ಎಸಿಪಿಗಳು, 10 ಜನ ಇನ್ಸ್ಪೆಕ್ಟರ್ಗಳು, ಎರಡು ಕೆಎಸ್ಆರ್ಪಿ ತುಕಡಿ ಸಹಿತ 100 ಪೊಲೀಸ್ ಸಿಬಂದಿ ಹಾಗೂ ಜೈಲು ಸೂಪರಿಂಟೆಂಡೆಂಟ್ ಕೃಷ್ಣ ಮೂರ್ತಿ ಮತ್ತು ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜೈಲಿನ ಒಳಗಿನ ಕೈದಿಗಳ ಬಳಿ ಮೊಬೈಲ್ ಫೋನ್ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಮೇರೆಗೆ ಈ ದಿಢೀರ್ ಕಾರ್ಯಾಚರಣೆ ಬೆಳಗ್ಗೆ 5.30 ರ ವೇಳೆಗೆ ನಡೆಸಲಾಗಿತ್ತು.
ಜೈಲಿನಲ್ಲಿರುವ ಕೈದಿಗಳಿಗೆ ಮೊಬೈಲ್ ಫೋನ್ ಹೊರಗಿನಿಂದ ಪೂರೈಕೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಮೇರೆಗೆ ಹಾಗೂ ಕೆಲವು ತಿಂಗಳುಗಳ ಹಿಂದೆ ಇಬ್ಬರು ಕೈದಿಗಳ ಕೊಲೆ ಸಂಭವಿಸಿದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿತ್ತು. ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಈ ಜಾಮರ್ ಕೆಲವು ಸಂದರ್ಭಗಳಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಕೈದಿಗಳಿಗೆ ಈಗ ಮೊಬೈಲ್ ಫೋನ್ ಬಳಕೆ ಮಾಡಲು ಮತ್ತೆ ಅವಕಾಶ ಸಿಕ್ಕಿದಂತಾಗಿದೆ. ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗಲು ಹಾಗೂ ಅವರಿಗೆ ಆಹಾರ, ತಿಂಡಿಗಳನ್ನು ಕೊಡಲು ಹೋಗುವ ಮಹಿಳೆಯರು ಮೊಬೈಲ್ ಫೋನ್ಗಳನ್ನು ತಾವು ಧರಿಸಿದ ಉಡುಪುಗಳ ಒಳಗೆ ಬಚ್ಚಿಟ್ಟು ಸಾಗಿಸಿ ಕೈದಿಗಳಿಗೆ ತಲುಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.