ಬ್ರಹ್ಮಾವರ: ಜನರ ಪ್ರೀತಿ, ಆಶೀರ್ವಾದದಿಂದ ವ್ಯವಹಾರ ಹಾಗೂ ಸಾರ್ವಜನಿಕ ಜೀವನದಲ್ಲಿ ಈ ಮಟ್ಟಕ್ಕೆ ಬಂದಿದ್ದೇನೆ. ನನಗೆ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಅತ್ಯಂತ ಪ್ರಾಮಾಣಿಕತೆಯಿಂದ, ಜಾಗರೂಕತೆಯಿಂದ ಭ್ರಷ್ಟಾಚಾರ ಮತ್ತು ಕಳಂಕರಹಿತವಾಗಿ ಜನ ಸೇವೆ ಮಾಡುತ್ತೇನೆ ಎಂದು ಮೀನುಗಾರಿಕೆ ಮತ್ತು ಯುವಜನ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಪ್ಪೂರು ಸಿದ್ದಿ ವಿನಾಯಕ ದೇವಸ್ಥಾನ ವಠಾರದಲ್ಲಿ ಭಾನುವಾರ ಉಪ್ಪೂರು ಗ್ರಾಮೀಣ ಕಾಂಗ್ರೆಸ್ ಮತ್ತು ಅಭಿಮಾನಿಗಳ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರ ಇರುವುದು ಜನರ ಸೇವೆ ಮಾಡಲು ಎಂದ ಅವರು ಕಷ್ಟಜೀವನದ ಅನುಭವ ಪಡೆಯುವ ಉದ್ದೇಶದಿಂದ ಕಾಕತಾಳೀಯ ಎಂಬಂತೆ ಅಜ್ಜನ ಊರು ಉಪ್ಪೂರು ಗ್ರಾಮದಲ್ಲಿ ಸಣ್ಣ ಮನೆಮಾಡಿ ವ್ಯವಹಾರ ಆರಂಭಿಸಿದೆ, ಈ ಊರಿನ ಜನರು ಪ್ರೀತಿ ಗೌರವಗಳಿಂದ ನೋಡಿದರು, ಇಂದು ಈ ಮಟ್ಟಕ್ಕೆ ಬಂದಿದ್ದೇನೆ, ಇವತ್ತು ಸಹಾ ಇಲ್ಲಿ ನನ್ನನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅಭಿನಂದಿಸಿರುವುದಕ್ಕೆ ಉಪ್ಪೂರಿನ ಜನತೆಗೆ ಅಭಾರಿಯಾಗಿರುವೆ, ನಿಮ್ಮ ಪ್ರೀತಿ ಅಭಿಮಾನಕ್ಕೆ ಚ್ಯುತಿ ಬಾರದಂತೆ ಅಭಿವೃದ್ಧಿ ಕೆಲಸ ಮಾಡುವೆ ಎಂದು ಹೇಳಿದರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮತ್ತು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೊನಿಕ ಕರ್ನೇಲಿಯೊ, ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ಧನ ತೋನ್ಸೆ, ತಾಲ್ಲೂಕು ಪಂಚಾಯಿತಿ ಸದಸ್ಯ ದಿನಕರ ಹೇರೂರು, ದೇವಸ್ಥಾನದ ಆಡಳಿತಾಧಿಕಾರಿ ನಾಗೇಶ್ ಶ್ಯಾನುಬಾಗ್, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಶೆಟ್ಟಿ, ಸಿದ್ಧಿವಿನಾಯಕ ಡೆವಲಪ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಹೂವಯ್ಯ ಸೇರ್ವೆಗಾರ್, ಡಿ.ಡಿ.ಪಿ.ಐ ದಿವಾಕರ ಶೆಟ್ಟಿ, ಗ್ರಾಮೀಣ ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು, ಶ್ರೀಪತಿ ರಾವ್ ಪ್ರಾರ್ಥಿಸಿದರು. ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಸಂಜೀವ ಪೂಜಾರಿ ಮಾಯಾಡಿ ಸ್ವಾಗತಿಸಿದರು. ರಮೇಶ ಕರ್ಕೇರ ಉಗ್ಗೇಲ್ಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.