ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.ಇಲ್ಲಿನ ಸೀತಾರಾಮ ಎಂಬವರಿಗೆ ಸೇರಿದ ಈ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ.ಈ ಸಂದರ್ಭದಲ್ಲಿ ಮನೆಯೊಳಗಡೆ ಯಾರೂ ಇರಲಿಲ್ಲ.
ಸೀತಾರಾಮರವರು ಅಗತ್ಯದ ಕೆಲಸದ ನಿಮಿತ್ತ ಪೇಟೆಗೆ ಹೋಗಿದ್ದರೆ ಅವರ ಪತ್ನಿ ಹಾಗೂ ಇತರರು ಮನೆಯ ಮುಂಭಾಗದ ಗದ್ದೆಯಲ್ಲಿ ಕೆಲಸದಲ್ಲಿದ್ದರು.
ಮಧ್ಯಾಹ್ನದ ಹೊತ್ತಿಗೆ ಪತ್ನಿ ಮನೆಗೆ ಬಂದಾಗ ಅಡುಗೆ ಕೋಣೆಯಲ್ಲಿ ಬೆಂಕಿಯು ಧಗಧಗನೆ ಉರಿಯುತ್ತಿತ್ತೆನ್ನಲಾಗಿದೆ.ತಕ್ಷಣ ಅವರು ಬೊಬ್ಬೆ ಹಾಕಿದ್ದು ಅಕ್ಕಪಕ್ಕದವರು ಧಾವಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಅದಾಗಲೇ ಬೆಂಕಿಯ ಕೆನ್ನಾಲಗೆ ಮನೆಯ ಛಾವಣಿಗೆ ಸಂಪೂರ್ಣ ಆವರಿಸಿತ್ತು. ಪರಿಣಾಮ ಮನೆಯ ಸೊತ್ತುಗಳು ಹಾಗೂ ಶೇಖರಿಸಿಟ್ಟಿದ್ದ ಕಟ್ಟಿಗೆ, ತೆಂಗಿನ ಕಾಯಿ ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗೆ ಕರಟಿಹೋಗಿತ್ತು. ಮಾಹಿತಿ ಪಡೆದ ಬಂಟ್ವಾಳ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಸುದ್ದಿ ತಿಳಿದ ಬಂಟ್ವಾಳ ಸಿ.ಐ. ಬಿ. ಕೆ. ಮಂಜಯ್ಯ, ಎಸ್.ಐ. ನಂದಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಹಾಗೆಯೇ ಕಂದಾಯ ನಿರೀಕ್ಷಕ ರಾಮ ಬಾಳ್ತಿಲ ಪಂಚಾಯತ್ನ ಪಿಡಿಒ ಪುಷ್ಪ, ಸ್ಥಳಕ್ಕಾಗಮಿಸಿ ನಷ್ಟದ ಅಂದಾಜು ಪರಿಶೀಲಿಸಿದರು.