ಮಂಗಳೂರು : ಡಿಸೆಂಬರ್ 9ರಿಂದ 13ರ ವರೆಗೆ ಬದಿಯಡ್ಕದಲ್ಲಿ ನಡೆಯುವ ವಿಶ್ವ ತುಳುವೆರೆ ಆಯನೊದ ಸ್ವಾಗತ ಸಮಿತಿ ಸಭೆಯು ಮಂಗಳೂರು ಅಖಿಲ ಭಾರತ ತುಳು ಒಕ್ಕೂಟದ ಕಛೇರಿಯಲ್ಲಿ ಜರಗಿತು. ವಿಶ್ವ ತುಳುವೆರೆ ಆಯನೊ ಸಮಿತಿಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ತುಳುವರ ನಿಜವಾದ ವಿಶ್ವ ದರ್ಶನ ತುಳುವೆರೆ ಆಯನೊದ ಮುಖಾಂತರ ಆಗಲಿದೆ ಎಂದು ತುಳುನಾಡಿನ ಜಾತಿ ಮತ ಭಾಷಾ ಸೌಹಾರ್ದತೆಯ ಪ್ರತೀಕವಾಗಲಿದೆಯೆಂದೂ ಹೇಳಿದರು. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈಗಾಗಲೇ ವಿಶ್ವದ ವಿವಿಧ ದೇಶಗಳಲ್ಲಿರುವ ತುಳುವರನ್ನು ಮತ್ತು ತುಳು ಕೂಟಗಳನ್ನು ಸಂಪರ್ಕಿಸಿ ಅಲ್ಲಲ್ಲಿ ಸಮಿತಿ ರೂಪೀಕರಿಸಲು ಸಿದ್ದತೆ ನಡೆದಿದೆ. ವಿದೇಶಗಳಲ್ಲಿರುವ ಎಲ್ಲಾ ತುಳುವರನ್ನೂ ಸಮ್ಮೇಳನಕ್ಕೆ ಸಹಕರಿಸುವಂತೆ ಅಭ್ಯರ್ಥಿಸಲಾಗಿದೆಯೆಂದರು. ತುಳುನಾಡಿನಲ್ಲಿ ಹೆಚ್ಚು ತುಳಿತಕ್ಕೊಳಪಟ್ಟವರೆಂದರೆ ಕಾಸಗೋಡಿನ ತುಳುವರು. ಆದುದರಿಂದ ಕಾಸರಗೋಡಿನಲ್ಲಿ ನಡೆಯು ಈ ವಿಶ್ವ ಮಟ್ಟದ ಕಾರ್ಯಕ್ರಮಕ್ಕೆ ತುಳುವರೆಲ್ಲರೂ ಒಟ್ಟಾಗಿ ಸಹಕರಿಸುವುದು ಅಗತ್ಯ ಎಂದರು.
ತುಳು ಕಾರ್ಯಕ್ರಮ ಮತ್ತು ಹೋರಾಟಗಳು ಅಲ್ಲಲ್ಲಿ ನಡೆಯುವುದು ಶ್ಲಾಘನೀಯ ಬೆಳವಣಿಗೆಯಾದರೂ ತುಳುವರು ಸಾಂಘಿಕ ಶಕ್ತಿಯನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಆದುದರಿಂದಲೇ ನಮಗೆ ಸಿಗಬೇಕಾದ ಸವಲತ್ತುಗಳು ವಂಚಿಸಲ್ಪಡುತ್ತಿದೆ ಮತ್ತು ನಮ್ಮ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕಾಗಿ ತುಳು ಸಂಘಟನೆಗಳೆಲ್ಲವೂ ಒಟ್ಟುಗೂಡುವುದು ಅನಿವಾರ್ಯ ಎಂದು ಡಾ. ಆಶಲತಾ ರೈ ಮಾಲಾಡಿ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿಯವರು ಮಾತನಾಡಿ ವಿಶ್ವ ತುಳುವೆರೆ ಆಯನಕ್ಕೆ ಮಾಧ್ಯಮ ರಂಗದ ಸಂಪೂರ್ಣ ಬೆಂಬಲವಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯ ಬ್ಯಾಂಕ್ ವರ್ಕರ್ಸ್ ಓರ್ಗನೈಸೇಶನ್ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಎಂ, ವಿಶ್ವ ತುಳುವೆರೆ ಆಯನೊ ಸಮಿತಿಯ ಎ.ಸಿ.ಭಂಡಾರಿ, ಡಾ. ನಿರಂಜನ ರೈ ಉಪ್ಪಿನಂಗಡಿ, ಪ್ರೊ. ಶ್ರೀನಾಥ್ ಕಾಸರಗೋಡು, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಸರಪಾಡಿ ಅಶೋಕ ಶೆಟ್ಟಿ, ನ್ಯಾ. ಬಾಲಕೃಷ್ಣ ಶೆಟ್ಟಿ, ಸಿರಾಜ್ ಅಡ್ಕರೆ, ದಿನೇಶ್ ರೈ ಕಡಬ, ಶಮಿನ ಆಳ್ವ, ಕಾಂತಿ ಶೆಟ್ಟಿ ಬೆಂಗಳೂರು, ಚಂದ್ರಹಾಸ ರೈ ಪೆರಡಾಲಗುತ್ತು, ಜ್ಯೋತಿಪುಷ್ಪ ಸರಳಾಯ, ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಮೂಲ್ಕಿ ಕರುಣಾಕರ ಶೆಟ್ಟಿ, ಭೂತನಾಥೇಶ್ವರ ಕ್ರೀಡೋತ್ಸವ ಸಮಿತಿಯ ಕುಸುಮಾಕರ, ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಎಮ್.ಎಸ್.ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಸದಸ್ಯರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ಡಾ. ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ತುಳುವೆರೆ ಆಯನೊದ ರೂಪುರೇಶೆಗಳ ಬಗ್ಗೆ ಮಾಹಿತಿ ನೀಡಿದರು. ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿದರ ಶೆಟ್ಟಿ ಸ್ವಾಗತಿಸಿ ನಿರಂಜನ ರೈ ಪೆರಡಾಲ ವಂದಿಸಿದರು. ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.