ಬಂಟ್ವಾಳ, ಆ.17: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಶಾಲೆಗೆ ಬೀಗ ಜಡಿದು ಮಂಗಳವಾರವೂ ಪ್ರತಿಭಟನೆ ನಡೆಸಿದರು.
ಶಾಲೆ ಆವರಣದ ಹೊರ ಭಾಗದಲ್ಲಿರುವ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸರಕಾರ, ಶಿಕ್ಷಣಾಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು ಪ್ರತಿಭಟನಕಾರರ ಮನವೋಲಿಸ ಲು ಪ್ರಯತ್ನಿಸಿದರಾದರೂ ಕ್ಷೇತ್ರ ಶಿಕ್ಷಣಧಿಕಾರಿಯೇ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದು ಕುಳಿತರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವರ್ಗಾವಣೆಗೊಂಡ ಇಬ್ಬರು ಶಿಕ್ಷಕರ ಪೈಕಿ ಒಬ್ಬರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಅವರನ್ನು ಶಾಲೆಯಲ್ಲಿ ಉಳಿಸಲಾಗುವುದು. ವರ್ಗಾವಣೆಗೊಂಡ ಇನ್ನೊಬ್ಬರು ಶಿಕ್ಷಕಿಯ ಬದಲಿ ಒಬ್ಬ ಶಿಕ್ಷಕಿಯನ್ನು ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆ ನೀಡಿದ್ದರಿಂದ ಪ್ರತಿಭಟನಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಬಳಿಕ ಶಾಲೆಯ ಗೇಟಿನ ಬೀಗ ತೆಗೆದು ವಿದ್ಯಾಥಿರ್üಗಳು ಹಾಗೂ ಶಿಕ್ಷಕರನ್ನು ತರಗತಿಗೆ ಪ್ರವೇಶಿಸಲು ಅನುವು ಮಾಡಿಕೊಡಲಾಯಿತು.
ಕೊಟ್ಟಾರಿ ಮಾತನಾಡಿ, 125 ವರ್ಷ ಇತಿಹಾಸವಿರುವ ಈ ಶಾಲೆಯಲ್ಲಿ 90ರ ದಶಕದಲ್ಲಿ 1,500 ವಿದ್ಯಾಥಿರ್üಗಳು ಕಲಿಯುತ್ತಿದ್ದು ತಾಲೂಕಿನ ಮಾದರಿ ಶಾಲೆಯಾಗಿದೆ. ಪ್ರಸ್ತುತ ವರ್ಷ ಈ ಶಾಲೆಯಲ್ಲಿ 213 ಮಂದಿ ವಿದ್ಯಾಥಿರ್üಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಈ ಶಾಲೆಯಲ್ಲಿ ಇದ್ದ 10 ಮಂದಿ ಶಿಕ್ಷಕರ ಪೈಕಿ ಇಬ್ಬರಿಗೆ ವರ್ಗಾವಣೆ ಆದೇಶ ಬಂದಿರುವುದು ಶಾಲಾಭಿವೃದ್ಧಿ ಮಂಡಳಿ ಹಾಗೂ ವಿದ್ಯಾಥಿರ್üಗಳ ಪೋಷಕರನ್ನು ಕಂಗೆಡಿಸಿದೆ. ಉಳಿದ ಎಂಟು ಮಂದಿ ಶಿಕ್ಷಕರಲ್ಲಿ ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕಿಯರನ್ನು ಹೊರತು ಪಡಿಸಿದರೆ ಆರು ಮಂದಿ ಶಿಕ್ಷಕರು ಕರ್ತವ್ಯದಲ್ಲಿರುತ್ತಾರೆ. ಅದರಲ್ಲೂ ಒರ್ವರು ಈ ಹಿಂದೆ ಬಾಲವಾಡಿ ಇದ್ದಾಗಿನ ಶಾಲಾ ಮಾತೆ. ಶಿಕ್ಷಣ ಇಲಾಖೆಯ ಅನುಪಾತ ಲೆಕ್ಕಾಚಾರದಲ್ಲೂ ವಿದ್ಯಾಥಿರ್üಗಳಿಗೆ ಬೇಕಾದಷ್ಟು ಶಿಕ್ಷಕರು ಲಭ್ಯವಿಲ್ಲದೆ ಇರುವುದರಿಂದ ಶಿಕ್ಷಕರ ವರ್ಗಾವಣೆ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.
ವರ್ಗಾವಣೆಗೊಂಡ ಇಬ್ಬರು ಶಿಕ್ಷಕರ ಪೈಕಿ ಒಬ್ಬರ ವರ್ಗಾವಣೆ ಆದೇಶವನ್ನು ರದ್ದು ಪಡಿಸಿ, ಒಬ್ಬ ಬದಲಿ ಶಿಕ್ಷಕನನ್ನು ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದ್ದು ಎರಡು ದಿವಸದಲ್ಲಿ ಆದೇಶ ರದ್ದು ಪಡಿಸಿ ಬದಲಿ ಶಿಕ್ಷಕರನ್ನು ನೀಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ತಾಲೂಕು ಪಂಚಾಯತ್ ಸದಸ್ಯೆ ಮಾಬಲ ಆಳ್ವ, ಊರಿನ ಪ್ರಮುಖರಾದ ರಾಜೇಶ್ ಕೊಟ್ಟಾರಿ, ಯತಿನ್ ಪೂಜಾರಿ, ವಜ್ರನಾಥ ಕಲ್ಲಡ್ಕ, ಮುಸ್ತಫಾ ಕಲ್ಲಡ್ಕ, ಶಾಫಿ ಕಲ್ಲಡ್ಕ, ಜಾಫರ್ ಕಲ್ಲಡ್ಕ, ಅಬೂಬಕ್ಕರ್, ಅಶ್ರಫ್, ಗ್ರಾ.ಪಂ ಸದಸ್ಯೆ ಆಯಿಷಾ ಮೊದಲಾದವರಿದ್ದರು.