ಪಡುಬಿದ್ರಿ, ಆ.18: ಉಚ್ಚಿಲ ಮುಳ್ಳಗುಡ್ಡೆಯಲ್ಲಿನ ಹಝ್ರತ್ ಅಲಿ ಮೀರಾದಾತಾರ್ (ಹೂಂಜಾ) ಚಿಲ್ಲಾ ಮುಬಾರಕ್ ಇದರ 5ನೇ ವರ್ಷದ ಉರೂಸ್ ಸಮಾರಂಭವು ಮಂಗಳವಾರ ಸಂಜೆ ಜರಗಿತು. ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದ ಪಡುಬಿದ್ರಿ ಪೋಲೀಸು ಠಾಣೆಯ ಪೋಲೀಸು ಉಪನಿರೀಕ್ಷಕ ಅಜ್ಮತ್ ಆಲಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭ ಪಡುಬಿದ್ರಿ ಠಾಣಾ ಎಸ್.ಐ ಅಜ್ಮತ್ ಆಲಿ ಮಾತನಾಡಿ, ಬಹಳಷ್ಟು ಶಿಸ್ತು ಬದ್ಧವಾಗಿ ಈ ಉರೂಸ್ ಆಚರಣೆಯು ನಡೆಯುತ್ತಾ ಬರುತ್ತಿದೆ. ಸರ್ವರೂ ಒಗ್ಗಟ್ಟಿನಿಂದ ಸೇರಿಕೊಂಡು ಸೌಹಾರ್ದಯುತವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು ಉತ್ತಮವಾಗಿದೆ. ಪೊಲೀಸು ಇಲಾಖೆಯು ಈ ಶಿಸ್ತು ಬದ್ಧ ಆಚರಣೆಗೆ ಸಹಕಾರವನ್ನು ನೀಡಲಿದೆ ಎಂದರು.
ಪ್ರಮುಖರಾದ ಸೈಯದ್ ತಾಹಿರಾಲಿ ಉಂಜಾ ಮೀರಾದಾತಾರ್, ಸೈಯ್ಯದ್ ಮೊೈನುದ್ದೀನ್ ಅಲ್ಕಾದ್ರಿ, ಸೈಯ್ಯದ್ ಮುಜಾಫರ್, ಸೈಯ್ಯದ್ ದಿಲ್ಕುಶ್, ಅಬ್ದುಲ್ ಹಮೀದ್, ಶೇಖ್ ಫೈಝಲ್ ಸಹಿತ ಮಂಗಳೂರು, ಕುಂದಾಪುರ ಸಹಿತ ಉಭಯ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ, ವಿದೇಶಗಳಿಂದ ಆಗಮಿಸಿದ್ದ ನೂರಾರು ಭಕ್ತರು ಉಪಸ್ಥಿತರಿದ್ದರು.
ಉರೂಸ್ ಸಮಾರಂಭದಲ್ಲಿ ಸಂದೋಲ್ ಮೆರವಣಿಗೆ ಮೂಲಕ ಸಂದಲ್ ಸಮರ್ಪಿಸಲಾಯಿತು. ನಂತರ ಪ್ರಾರ್ಥನೆ ನಡೆಸಿ ಆಶೀರ್ವಾದ ಪಡೆಯಲಾಯಿತು.