ಮಂಗಳೂರು: ದ.ಕ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರಿಗೆ ಜುಲೈ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ. ಇದರಿಂದ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರು, ವಿವಿಧ ಸಾಲ ಪಡೆದವರು, ವೇತನವನ್ನೇ ಆಶ್ರಯಿಸಿ ಜೀವನ ಸಾಗಿಸುವ ಶಿಕ್ಷಕ/ಶಿಕ್ಷಕಿಯರಿಗೆ ಅನನುಕೂಲ ಆಗಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಿದರೆ "ಅಲಾಟ್ಮೆಂಟ್ ಈಗಷ್ಟೇ ಬಂದಿದೆ; ಅಪ್ಲೋಡ್ ಮಾಡುತ್ತಾ ಇದ್ದೇವೆ' ಎಂಬ ಉತ್ತರ ಕಳೆದ ಒಂದು ವಾರದಿಂದ ಕೇಳಿ ಬರುತ್ತಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ. ಆಗಸ್ಟ್ ತಿಂಗಳ ಪ್ರಾರಂಭದ ವೇಳೆಗೆ ಸಿಗಬೇಕಾಗಿದ್ದ ಜುಲೈ ತಿಂಗಳ ವೇತನ ಇದೀಗ ಮೂರು ವಾರ ಕಳೆದರೂ ಬಂದಿಲ್ಲ. ಇನ್ನೆರಡು ದಿನಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಬರಲಿದ್ದು, ಈ ಹಬ್ಬ ಆಚರಣೆ ಸಮಯದಲ್ಲಾದರೂ ಸಂಬಳ ಕೈಗೆ ಸಿಗಬಹುದೇ ಎಂಬ ನೀರೀಕ್ಷೆಯಲ್ಲಿದ್ದಾರೆ ಶಿಕ್ಷಕರು. ತಂತ್ರಜ್ಞಾನದಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗಿರುವಾಗ ಅಲಾಟ್ಮೆಂಟ್ ಆಗಿರುವ ವೇತನ ಅಪ್ಲೋಡ್ ಆಗಲು ಒಂದು ವಾರದ ಅವಧಿ ಬೇಕೇ ಎಂಬುದು ಶಿಕ್ಷಕರ ಪ್ರಶ್ನೆ.