ಮಂಗಳೂರು: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಂದೀಪ್ ಶೆಟ್ಟಿ ಕೊಲೆ ಯತ್ನ ಮತ್ತು ಹಲವು ಪ್ರಕರಣಗಳಿಗೆ ಸಂಬಂಧಿಸಿ 3 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ವಿಜಯ ಯಾನೆ ಮಂಕಿ ಸ್ಟಾಂಡ್ ವಿಜಯ್ (30), ಗೋರಿಗುಡ್ಡೆಯ ಮೆಲಿಕ್ ಯಾನೆ ಮೆಲಿಕ್ ಡಿ'ಸೋಜಾ (20) ಮತ್ತು ಕೋಡಿಕಲ್ನ ಪ್ರವೀಣ್ ಯಾನೆ ಚೋಟು (23) ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಆಯುಕ ಎಂ. ಚಂದ್ರಶೇಖರ್ ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು. ಡಿಸಿಪಿಗಳಾದ ಶಾಂತರಾಜು, ಡಾ | ಸಂಜೀವ್ ಪಾಟೀಲ್, ಎಸಿಪಿ ಶ್ರುತಿ ಅವರು ಉಪಸ್ಥಿತರಿದ್ದರು.
ಮಾರ್ನಮಿಕಟ್ಟೆಯ ಸಂದೀಪ್ ಶೆಟ್ಟಿಯನ್ನು ಮಂಕಿ ಸ್ಟಾಂಡ್ ವಿಜಯ್ ಹಾಗೂ ಆತನ ಸಹಚರರು 2016 ಮೇ 16 ರಂದು ಮಧ್ಯಾಹ್ನ ಮಾರ್ನಮಿಕಟ್ಟೆ ಪಾರ್ಕಿಂಗ್ ಬಳಿಯಿಂದ ಬೆನ್ನಟ್ಟಿ, ತಲವಾರುಗಳಿಂದ ಕಡಿದು, ಮಾರಣಾಂತಿಕ ಗಾಯಗೊಳಿಸಿ, ಕೊಲೆ ನಡೆಸಲು ಪ್ರಯತ್ನಿಸಿದ್ದರು.ಐವರು ಆರೋಪಿಗಳಾದ ನಿಖೀಲ್ ಶೆಟ್ಟಿ ಯಾನೆ ಎಲಿ, ಅಣ್ಣಯ್ಯ ಯಾನೆ ಅಣ್ಣು, ಧನರಾಜ್ ಯಾನೆ ಧನು, ಅಭೀಷೇಕ್ ಮತ್ತು ಸಂಪತ್ ಬಂಗೇರ ಅವರನ್ನು ಬಂಧಿಸಲಾಗಿತ್ತು. ಆದರೆ, ಪ್ರಮುಖ ಆರೋಪಿ ಗಳಾದ ವಿಜಯ್ ಯಾನೆ ಮಂಕಿ ಸ್ಟಾಂಡ್ ವಿಜಯ್, ಮೆಲಿಕ್ ಮತ್ತು ಪ್ರವೀಣ್ ಯಾನೆ ಚೋಟು ತಲೆಮರೆಸಿಕೊಂಡಿದ್ದರು. ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯ್ಭಾಗ್ ತಾಲೂಕಿನ ಬೆಕ್ಕೇರಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಿದೆ ಎಂದು ಅವರು ತಿಳಿಸಿದರು