ಮಂಗಳೂರು: ಐಸಿಸ್ ಚಟುವಟಿಕೆಗಳ ಬಗ್ಗೆ ರಾಜ್ಯದ ಆಂತರಿಕ ಭದ್ರತಾ ವಿಭಾಗವು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ), ರಾ, ಐಬಿ ಮತ್ತಿತರ ಸಂಸ್ಥೆಗಳ ಜತೆ ರಾಜ್ಯದ ಗುಪ್ತಚರ ವಿಭಾಗವು ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳೂರು ಅಥವಾ ಕರ್ನಾಟಕದಿಂದ ಐಸಿಸ್ಗೆ ಯಾರಾದರೂ ಸೇರ್ಪಡೆಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೂ ಇಲ್ಲಿನ ಯುವಕರನ್ನು ಐಸಿಸ್ನವರು ಸೆಳೆಯುತ್ತಿದ್ದಾರೆಯೇ ಎನ್ನುವ ಕುರಿತು ಗಮನಿಸಲಾಗುತ್ತಿದೆ. ಐಸಿಸ್ ಸಂಬಂಧಿತ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಐಸಿಸ್ ಚಟುವಟಿಕೆ ಸಹಿತ ಕರ್ನಾಟಕದ ಗುಪ್ತಚರ ಇಲಾಖೆ ಪ್ರತಿಯೊಂದು ಘಟನಾವಳಿ ಗಳ ಮೇಲೂ ಕಣ್ಗಾವಲು ಇರಿಸಿದೆ.
ಇತರ ಸಂಸ್ಥೆಗಳಿಂದ ಬರುವ ಮಾಹಿತಿಯನ್ನೂ ಗಂಭೀರವಾಗಿ ಪರಿಗಣಿಸುತ್ತದೆ ಎಂದವರು ಹೇಳಿದರು.ಮೈಸೂರು, ಚಿತ್ತೂರು ಮತ್ತು ಕೊಲ್ಲಂಗಳಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಗಳಿಗೆ ಸಾಮ್ಯತೆ ಇದೆ. ಈ ಮೂರು ಘಟನೆಗಳಲ್ಲಿ ಪ್ರಶರ್ ಕುಕ್ಕರ್ನಲ್ಲಿಟ್ಟು ಸ್ಫೋಟಿಸಲಾಗಿದೆ. ಅವುಗಳ ತುಲನಾತ್ಮಕ ತನಿಖೆ ನಡೆಯುತ್ತಿದೆ ಎಂದರು.