ನಿಂಜೂರು ಬರವಣಿಗೆ ವಾಲ್ಮೀಕಿ ರೀತಿಯಲ್ಲಿದೆ: ಡಾ| ಜನಾರ್ಧನ ಭಟ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.05: ಟಾಲ್ಸ್ಟೈ ಕಾದಂಬರಿ ಜಗತ್ತಿನ ಏರುಸ್ಥಾನದಲ್ಲಿದೆ. ಇದನ್ನು ಮೀರಿಸುವ ಪ್ರಯತ್ನ ಈ ವರೇಗೆ ಅಸಾಧ್ಯವಾಗಿದೆ. ಡಾ| ವ್ಯಾಸರಾಯ ನಿಂಜೂರು ಅವರು ತಮ್ಮ ಕಾದಂಬರಿಗಳಲ್ಲಿ ಕರ್ನಾಟಕ ಕರಾವಳಿ ಜನತೆಯ ಬದುಕಿಗೆ ಹೆಚ್ಚಿನ ಮಹತ್ವನೀಡಿದ್ದು ಅವರು ಮಹಾಭಾರತದ ಮಾದರಿಯಲ್ಲೇ ಕಥೆ ಬರವಣಿಗೆಗಳನ್ನು ರಚಿಸಿರುವರು. ಅಂದಿನ ವ್ಯಾಸರು ಮಹಾಭಾರತ ಬರೆದು ತೃಪ್ತಿ ಪಡೆಯದೆ ಭಾಗವತ ಬರೆದರು. ಆದರೆ ಈ ವ್ಯಾಸರು ಹವ್ಯಾಸವನ್ನಾಗಿಸಿ ಬರೆದು ಧನ್ಯರೆಣಿಸಿದರು. ನಿಂಜೂರು ತಮ್ಮ ಕಥೆ-ಲೇಖನಗಳಲ್ಲಿ ಧರ್ಮಗಳನ್ನು ಎಲ್ಲೂ ಲೇವಡಿ ಮಾಡಿಲ್ಲ. ಆದರೆ ಕೆಲವು ಪಾತ್ರಗಳಲ್ಲಿ ಅಣಕವನ್ನು (ಅಸಹನೆ) ತೋರಿಸಿರುವರು. ನಿಂಜೂರು ಬರವಣಿಗೆ ವಾಲ್ಮೀಕಿ ಸೃಷ್ಠಿಯ ರೀತಿಯಲ್ಲಿದೆ ಎಂದು ಕತೆ, ಕಾದಂಬರಿಕಾರ ಸೃಜನಶೀಲ ಸಾಹಿತಿ, ವಿಮರ್ಶಕ ಡಾ| ಬಿ. ಜನಾರ್ಧನ ಭಟ್ ತಿಳಿಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ಜೆ.ಪಿ ನಾಯಕ್ ಭವನದಲ್ಲಿ ದಿನಪೂರ್ತಿಯಾಗಿಸಿ ಆಯೋಜಿಸಿದ್ದ ಕಥಾಕಥನ ಹಾಗೂ ಡಾ| ವ್ಯಾಸರಾವ್ ನಿಂಜೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ| ಜನಾರ್ಧನ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿ, ಸಂಶೋಧಕ ಡಾ| ವ್ಯಾಸರಾವ್ ನಿಂಜೂರು, ಲೇಖಕ ಡಾ| ಕರುಣಾಕರ ಶೆಟ್ಟಿ, ಕಥೆಗಾರ ರಾಜೀವ ನಾಯಕ್ ಭಾಗವಹಿಸಿದ್ದು, ಕನ್ನಡ ವಿಭಾಗ ಮುಂಬಯಿ ಇದರ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಡಾ| ನಿಂಜೂರುಗೆ ಅಭಿನಂದನಾ ನುಡಿಗಳನ್ನಾಡಿದರು. ಪ್ರಸಿದ್ಧ ವಿಮರ್ಶಕಿ ಡಾ| ಮಮತಾ ರಾವ್ ಅವರು ನಿಂಜೂರು ಅವರ ಸಣ್ಣ ಕಥೆಗಳÀು, ಕನ್ನಡ ವಿಭಾಗದ ಸಹ ಸಂಶೋಧಕಿ ರಮಾ ಉಡುಪ ಅವರು ನಿಂಜೂರುರ ಕಾದಂಬರಿಗಳು, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ನಿಂಜೂರುರ ಗದ್ಯ ಸಾಹಿತ್ಯ ಹಾಗೂ ಸುಶೀಲಾ ಎಸ್.ದೇವಾಡಿಗÀ ಅವರು ನಿಂಜೂರು ನಾಟಕಗಳ ಕುರಿತು ಮಾತನಾಡಿದರು.
ಸಾಹಿತ್ಯ ಬಲವರ್ಧನೆ ಕೃತಿಪುಷ್ಪ ಅವರ ಕೊಡುಗೆ ಅಭಿನಂದನೀಯ. ನಾವು ಯಾವೊತ್ತೂ ಪುಷ್ಫಗುಪ್ಚ ಕೊಡುವ ಬದಲು ಕೃತಿಪುಷ್ಪ ನೀಡಿ ಗೌರವಿಸುವ ವಾಡಿಕೆ. ಇಂತಹ ಕೃತಿಪುಷ್ಪ ಬಾಡದ ಹೂವಾಗಿರುತ್ತದೆ. ಅಂತೆಯೇ ಡಾ| ನಿಂಜೂರು ಸಾಹಿತ್ಯಲೋಕದಲ್ಲಿ ಸದಾ ಅರಳುತ್ತಲೇ ಬರವಣಿಗೆಯ ಪರಿಮಳವನ್ನು ಪಸರಿಸುತ್ತಿರಲಿ ಎಂದು ಡಾ| ಉಪಾಧ್ಯ ನಿಂಜೂರು ಅವರನ್ನು ಅಭಿನಂದಿಸಿದರು.
ಮುಂಬಯಿ ಜನತೆ ತಮ್ಮ ಪ್ರೀಯಯನ್ನಿತ್ತು ನನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿದ್ದಾರೆ. ಅವರ ಪ್ರೇರಣೆಯೇ ನನ್ನ ಬಾಳಿನ ಗೌರವ, ಅಭಿಮಾನ ಎಂದೆಣಿಸಿದ್ದೇನೆ ಎಂದು ಡಾ| ನಿಂಜೂರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಹಿರಿಯ ರಂಗ ಕಲಾವಿದೆ ಅಹಲ್ಯಾ ಬಲ್ಲಾಳ ಕಾರ್ಯಕ್ರಮ ನಿರ್ವಾಹಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಅಭಾರ ಮನ್ನಿಸಿದರು.