ಕುಂದಾಪುರ, ಬಸ್ರೂರು ಮೂರುಕೈಯಲ್ಲಿ ಮೇಲ್ಸೇತುವೆ ಬೇಡಿಕೆ ಕುರಿತು ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರದ ಚೀಫ್ ಜನರಲ್ ಮ್ಯಾನೇಜರ್ ರಾಜೀವ ರೆಡ್ಡಿಯವರ ಆದೇಶದ ಮೇರೆಗೆ ಇಂದು ರಾ.ಹೆ.66 ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯಕುಮಾರ್ರವರು ತಜ್ಞ ಸಮಿತಿಯ ಜೊತೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರ ಜೊತೆ ವಿವರವಾಗಿ ಚರ್ಚಿಸಿ ಸಮಗ್ರ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಯಪ್ರಕಾಶ ಹೆಗ್ಡೆಯವರು ಮಾತನಾಡಿ ಬಸ್ರೂರು ಮೂರುಕೈ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಸಂಗಮದ ಸ್ಥಳವಾಗಿದ್ದು ಇದು ಜನದಟ್ಟಣೆಯ ಪ್ರದೇಶವಾಗಿದೆ ಮತ್ತು ಇಲ್ಲಿ ದಿನವೂ ಸಾವಿರಾರು ಕಾರು, ಲಾರಿ, ಬಸ್ಸುಗಳು ಮತ್ತು ಹತ್ತು ಚಕ್ರಗಳ ಸರಕುಸಾಗಣೆಯ ವಾಹನಗಳು ಚಲಿಸುವ ಕಾರಣಕ್ಕೆ ಮುಖ್ಯವಾಗಿ ಟ್ರಾಫಿಕ್ ಜಾಮ್ ತಪ್ಪಿಸುವ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಅಂಡರ್ಪಾಸ್ ಕಾಮಗಾರಿ ಮಾಡದೆ ಮುಂದಿನ 50 ವರ್ಷಗಳಲ್ಲಿ ಉಂಟಾಗಲಿರುವ ವಾಹನ ದಟ್ಟಣೆಯ ಮುಂದಾಲೋಚನೆ ಇಟ್ಟುಕೊಂಡು ಫ್ಲೈಓವರ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕೋಟೇಶ್ವರ , ಕೋಟ, ಬ್ರಹ್ಮಾವರಗಳಲ್ಲಿ ನಿರ್ಮಿಸಿರುವ ಅಂಡರ್ಪಾಸ್ ಪಕ್ಕದ ಸರ್ವೀಸ್ ರಸ್ತೆಗಳು ಕಿರಿದಾಗಿರುವ ಕಾರಣಕ್ಕೆ ಆ ಪ್ರದೇಶಗಳಲ್ಲಿ ಇದೀಗ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣಿಸಿದ್ದು ಮುಂದೆ ಅಪÀಘಾತಗಳು ಹೆಚ್ಚಾಗುವ ಅಪಾಯವೂ ಇದೆ. ಆ ಕಾರಣಕ್ಕಾಗಿ ಆ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆಗಳನ್ನು ಅಗಲಗೊಳಿಸಬೇಕು ಹಾಗೂ ಅಂಬಲಪಾಡಿ ಮತ್ತು ಕಟಪಾಡಿಯಲ್ಲಿ ಕೂಡಾ ಅಂಡರ್ಪಾಸ್ ನಿರ್ಮಿಸದೆ ಪ್ಲೈಓವರ್ ನಿರ್ಮಿಸಬೇಕು. ಈ ಕುರಿತು ತಾನು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಢ್ಕರಿಯವರಿಗೆ ಪತ್ರ ಬರೆದಿರುತ್ತೇನೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳಲ್ಲಿ ಮನವಿ ನೀಡಿ ಚರ್ಚಿಸಿದ್ದು ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂಬುವುದಾಗಿ ವಿವರಿಸಿದರು.
ಫ್ಲೈಓವರ್ ಹೋರಾಟ ಸಮಿತಿಯ ಪ್ರಮುಖ ಬಸ್ರೂರು ನರೇಂದ್ರ ಶೆಟ್ಟಿಯವರು ಸಾರ್ವಜನಿಕರ ಬೇಡಿಕೆಯ ಫ್ಲೈಓವರ್ ಕುರಿತಾಗಿ ತಾವೇ ಸ್ವತಃ ತಯಾರಿಸಿದ ನೀಲನಕ್ಷೆಯನ್ನು ಹಸ್ತಾಂತರಿಸಿ ಅಂಡರ್ಪಾಸ್ ನಿರ್ಮಿಸಿದ್ದಲ್ಲಿ ಉದ್ಭವಿಸಲಿರುವ ಸಮಸ್ಯೆಯ ಕುರಿತಾಗಿ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ವಸಂತಿ ಸಾರಂಗ, ಉಪಾಧ್ಯಕ್ಷರಾದ ರಾಜೇಶ ಕಾವೇರಿ, ಸದಸ್ಯರಾದ ಪುಷ್ಪಾ ಶೇಟ್, ಜ್ಯೋತಿ ಗಣೇಶ್ ಕೋಡಿ, ಗುಣರತ್ನ, ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್, ಕೋಣಿ ನಾರಾಯಣ ಆಚಾರಿ, ಜನಪರ ಪ್ರಗತಿಪರ ವೇದಿಕೆಯ ಪ್ರಮುಖರಾದ ಮಾಣಿ ಗೋಪಾಲ, ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ವಿನೋದ್ ಕ್ರಾಸ್ತಾ, ಶ್ರೀಧರ ಆಚಾರ್ಯ, ಸುನಿಲ್ ಪೂಜಾರಿ ಕೋಡಿ, ಸ್ಟೀವನ್ ಹಂಗಳೂರು, ಸುರೇಶ್ ಆನಗಳ್ಳಿ, ಗಿರೀಶ್ ಜಿ.ಕೆ., ರಂಜಿತ್ ಕುಮಾರ್ ಶೆಟ್ಟಿ, ಶೈಲೇಶ್ ಕುಂದಾಪುರ, ಕುಮಾರ್ ಖಾರ್ವಿ, ಅಶೋಕ್ ಸಾರಂಗ, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.