ಮಂಗಳೂರು: ಪಣಂಬೂರು ರಾ.ಹೆ.66ರ ಬೀಚ್ ತಿರುವು ರಸ್ತೆ ಬದಿಯಲ್ಲಿ ಸೆ.6ರಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಣಂಬೂರು ಠಾಣಾ ಪೊಲೀಸರು ಈರ್ವರನ್ನು ಬುಧವಾರ ಬಂಧಿಸಿದ್ದಾರೆ.ಹಾವೇರಿ ರಾಣಿ ಬೆನ್ನೂರಿನ ನಾಗರಾಜ ಗೋವಿಂದಪ್ಪ ಲಮಾಣಿ (24),ಅದೇ ಊರಿನ ವಿರೇಸ್ ಶಿವಪ್ಪ ಲಮಾಣಿ ಬಂಧಿತರು.ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಘಟನೆ ವಿವರ
ಸೆಪ್ಟಂಬರ್ 6ರಂದು ಪಣಂಬೂರು ಠಾಣಾ ವ್ಯಾಪ್ತಿಯ ರಾ.ಹೆ.66ರ ಬದಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ರಾಣೆಬೆನ್ನೂರು ಗುಂಡೇನ ಹಳ್ಳಿ ನಿವಾಸಿ ರೇಖಪ್ಪ (27) ಎಂಬ ಯುವಕನ ಮೃತದೇಹ ಪತ್ತೆಯಾಗಿತ್ತು. ಆರೋಪಿ ನಾಗರಾಜನಿಗೂ ಮೃತ ರೇಖಪ್ಪನ ಪತ್ನಿ ಪಾಪಿ ಯಾನೆ ಸಾವಿತ್ರಿ ನಡುವಿನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂದ ತಿಳಿದ ರೇಖಪ್ಪ ಊರಿಗೆ ಹೋಗುವುದಾಗಿ ತಿಳಿಸಿದ್ದ. ಊರಿಗೆ ಹೋಗಿ ತನ್ನ ಪ್ರೇಯಸಿ ಆತನ ಪತ್ನಿಯೊಂದಿಗೆ ಗಲಾಟೆ ಮಾಡಿ ಏನಾದರೂ ಅನಾಹುತ ಮಾಡಿಯಾನು, ಈತನನ್ನು ಇಲ್ಲಿಯೇ ಮುಗಿಸಬೇಕು ಎಂಬ ನಿರ್ಧಾರಕ್ಕೆ ಬಂದು ತನ್ನ ಸ್ನೇಹಿತ ಇನ್ನೋರ್ವ ಆರೋಪಿ ವೀರೇಶನ ಬಳಿ ಬಂದು ಆತನನ್ನು ಬಸ್ಸು ಹತ್ತಿಸಿ ಬರೋಣ ಎಂದು ಉಪಾಯವಾಗಿ ಆ ಬಳಿಕ ಸಂಜೆ 6 ಗಂಟೆಗೆ ಹೊಸಂಗಡಿಯಿಂದ ಹೊರಟವರು ಮಂಗಳೂರು ಸ್ಟೇಟ್ಬ್ಯಾಂಕ್ ಬಳಿಯಿರುವ ರಾಜೇಶ್ ಬಾರ್ನಲ್ಲಿ 3 ಜನರೂ ಮದ್ಯ ಸೇವಿಸಿದರಲ್ಲದೆ ರೇಖಪ್ಪನಿಗೆ ಪ್ರಜ್ಞೆ ತಪ್ಪುವಂತೆ ಕುಡಿಸಿ ಪಣಂಬೂರು ಬೀಚ್ಗೆ ರಿಕ್ಷಾದಲ್ಲಿ ಕರೆ ತಂದಿದ್ದರು.
ರೇಖಪ್ಪ ಇಚ್ಚೆಯಂತೆ ಬಿರಿಯಾನಿ ತೆಗೆಸಿಕೊಟ್ಟದ್ದಲ್ಲದೆ ಮದ್ಯವನ್ನೂ ಕುಡಿಸಿ ವೀರೇಶ್ ಸಹಾಯದೊಂದಿಗೆ ಪಣಂಬೂರು ಬೀಚ್ಗೆ ರಿಕ್ಷಾದಲ್ಲಿ ಆಗಮಿಸಿದ್ದರು.ಕುಡಿದ ಅಮಲಿನಲ್ಲಿದ್ದ ಮೂವರನ್ನು ಬೀಚ್ ತಿರುವು ರಸ್ತೆಯಲ್ಲಿ ಇಳಿಸಿ ರಿಕ್ಷಾ ಚಾಲಕ ತೆರಳಿದ್ದು ಭಾನುವಾರವಾದ್ದರಿಂದ ಜನಸಂಖ್ಯೆ ಈ ಭಾಗದಲ್ಲಿ ವಿರಳವಾದ್ದ ಕಾರಣ ಇದನ್ನು ಮನಗಂಡ ಆರೋಪಿಗಳು ರೇಖಪ್ಪನನ್ನು ಮುಗಿಸಲು ಒಳ್ಳೆಯ ಜಾಗವೆಂದು ತೀರ್ಮಾನಕ್ಕೆ ಬಂದು ರೇಖಪ್ಪನ ಕುತ್ತಿಗೆ ಹಿಡಿದು ದೂಡಿಕೊಂಡು ಹೋಗಿ ನೀರು ತುಂಬಿದ ಜಾಗದ ಬಳಿ ಆತನನ್ನು ಮಗುಚಿ ಹಾಕಿ ಕುತ್ತಿಗೆ ಹಿಸುಕಿ ಹತ್ತಿರದಲ್ಲಿದ್ದ ದೊಡ್ಡ ಗಾತ್ರದ ಕಾಂಕ್ರಿಟ್ ಕಲ್ಲನ್ನು ತಂದು ರೇಖಪ್ಪ ಮುಖದ ಹಾಕಿ ಕೊಲೆ ನಡೆಸಿದ್ದಾರೆ.ನಾಗರಾಜ 3 ಬಾರಿ ಕಲ್ಲನ್ನು ಎತ್ತಿ ಹಾಕಿದ ಬಳಿಕ ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡ ಬಳಿಕ ಅಲ್ಲಿಂದ ತೆರಳಿದ್ದಾಗಿ ಆರೋಪಿಗಳು ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.