ಮಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಮಾಜಿ ಸಚಿವ ಕೆ.ಜೆ. ಜಾರ್ಜ್ಗೆ ಕ್ಲೀನ್ಚಿಟ್ ನೀಡಿರುವ ಹಾಗೂ ರಾಜ್ಯ ಸರಕಾರಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಗಣಪತಿ ಅವರ ಡೈಯಿಂಗ್ ಡಿಕ್ಲರೇಷನ್ಗಿಂತ ದೊಡ್ಡ ಪುರಾವೆಯಿಲ್ಲ. ಡೈಯಿಂಗ್ ಡಿಕ್ಲರೇಷನ್ಗೆ ಕೋರ್ಟ್ ಮಹತ್ವ ನೀಡುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರಕರಣವನ್ನು ಸಿಐಡಿಗೆ ನೀಡುವ ಮೂಲಕ ಸಿಎಂ ಜಾರ್ಜ್ ಅವರನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ ಎಂದರು. ಕುದ್ರೋಳಿ ದೇವಸ್ಥಾನದಲ್ಲಿ ರವಿವಾರ ಉರುಳು ಸೇವೆ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿ. ಜಾರ್ಜ್ ಅವರನ್ನು ಸಂಪುಟಕ್ಕೆ ಸೇರಿಸುವ ಬಗ್ಗೆ ಮೇಲಿಂದ ಯಾವುದೇ ಒತ್ತಡವಿಲ್ಲ. ಇದು ಕಾಂಗ್ರೆಸನ್ನು ಮುಗಿಸುವ ಕೆಲಸ. ಗಣಪತಿ ಪ್ರಕರಣವನ್ನು ಸಿಐಡಿ, ಸಿಬಿಐಗೆ ನೀಡದೆ ಸುಪ್ರೀಂ ಕೋರ್ಟ್ಗೆ ನೀಡಬೇಕು ಎಂದರು.3 ರಾಜ್ಯಗಳು ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕಚ್ಚಾಡುತ್ತಿವೆ. ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಸೆ. 20ಕ್ಕೆ ಹೊರಡುವ ತೀರ್ಪು ದೇಶದ ಒಗ್ಗಟ್ಟಿಗೆ ತೊಂದರೆಯಾಗದಂತಿದ್ದು, ಎಲ್ಲರಿಗೂ ಸೂಕ್ತ ನ್ಯಾಯ ಒದಗಬೇಕೆಂಬ ಉದ್ದೇಶದೊಂದಿಗೆ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.