ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕಾಪಿಕಾಡು ಮತ್ತು ಕೋಟೆಕಾರಿನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟರೆ ಓರ್ವ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳವಾರ ತಡರಾತ್ರಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹ ಸವಾರ ಕಣ್ವತೀರ್ಥ ಕಾಂತಲಚ್ಚಿಲ್ ನಿವಾಸಿ ಗಂಗಾಧರ್ ಕೆ.ಎಂ.(47) ಸ್ಥಳದಲ್ಲೇ ಮೃತಪಟ್ಟರೆ, ಸಹ ಸವಾರ ಮಂಜೇಶ್ವರ ಗ್ರಾ. ಪಂ. ಸದಸ್ಯ ಹಾಗೂ ಬಿಜೆಪಿ ಮುಖಂಡ ಭಗವಾನ್ದಾಸ್ ಗಂಭೀರ ಗಾಯಗೊಂಡು ಮಂಗಳರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಬೀರಿ ಬಳಿ ಬುಧವಾರ ಬೆಳಗ್ಗೆ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸೋಮೇಶ್ವರ ಉಚ್ಚಿಲ ಪೆರಿಬೈಲು ನಿವಾಸಿ ಮಹಮ್ಮದ್ ಅಫ್ತಾರ್ (22) ಸ್ಥಳದಲ್ಲೇ ಮೃತಪಟ್ಟರು.
ಕಾಪಿಕಾಡು ಬಳಿ ಸಂಭವಿಸಿದ ಆಪಘಾತದಲ್ಲಿ ಮೃತಪಟ್ಟ ಗಂಗಾಧರ್ ಅವರು ಭಗವಾನ್ದಾಸ್ ಅವರ ಬೈಕ್ನಲ್ಲಿ ಮಂಗಳೂರಿನಿಂದ ತಲಪಾಡಿ ಕಡೆ ಸಂಚರಿಸುತ್ತಿದ್ದಾಗ ತಲಪಾಡಿ ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ಕಾರು ಅಪರಿಮಿತ ವೇಗದಲ್ಲಿ ಆಗಮಿಸಿ ಡಿವೈಡರ್ ಏರಿ ಇನ್ನೊಂದು ಕಡೆಯಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಗಂಗಾಧರ್ ಮೃತಪಟ್ಟು, ಭಗವಾನ್ದಾಸ್ ಗಾಯಗೊಂಡರು.