ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚೆಂಬೇರಿ ಮೀನಿನ ತಲೆಭಾಗವನ್ನು ಪದಾರ್ಥ ಮತ್ತು ಫ್ತೈ ಮಾಡಿ ತಿಂದು ಸುಮಾರು 150ಕ್ಕೂ ಹೆಚ್ಚು ಅಸ್ವಸ್ಥರಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ದ.ಕ.ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಚೆಂಬರಿಕ ಮೀನಿನ ತಲೆ ಭಾಗದ ಪದಾರ್ಥ ತಿಂದು ಉಳ್ಳಾಲ, ಅಂಬ್ಲಿಮೊಗರು, ಹರೇಕಳ, ಬಂಟ್ವಾಳ, ನಾಟೆಕಲ್ನ ಹಲವು ಕುಟುಂಬಗಳು ಸೇರಿದಂತೆ, ಉಳ್ಳಾಲದ ಫಿಶಮಿಲ್ವೊಂದರ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥರನ್ನು ಉಳ್ಳಾಲ ತೊಕ್ಕೊಟ್ಟು ,ದೇರಳಕಟ್ಟೆ, ಸೇರಿದಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಸ್ವಸ್ಥರಲ್ಲಿ ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದರೆ, ಕೆಲವು ಒಳರೋಗಿಗಳಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇನ್ನೂ ಕೆಲವು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರಕರಣಕ್ಕೆ ಕಾರಣ, ಯಾರ ನಿರ್ಲಕ್ಷದಿಂದ ಈ ಘಟನೆ ನಡೆದಿದೆ ಮತ್ತು ಮುನ್ನಚ್ಚೆರಿಕೆಯ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಸಬೇಕು. ಈ ಎಲ್ಲಾ ಅಂಶಗಳ ಬಗ್ಗೆ ಮೀನುಗಾರಿಕೆ ಇಲಾಖೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ , ಆಹಾರ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆಯುವಂತೆ ಸಚಿವ ಯು.ಟಿ.ಖಾದರ್ ತಾಕೀತು ಮಾಡಿದ್ದಾರೆ.