ಮಂಗಳೂರು: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಅಸ್ರಣ್ಣ ಅವರ ಮನೆಯಲ್ಲಿ ಅ.೪ರಂದು ಬೆಳಗ್ಗಿನ ಜಾವ ದರೋಡೆ ಕೃತ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದೇವಸ್ಥಾನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಹಿತ ೫ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಂಗಳೂರು ಬಿಜೈ ಕಾಪಿಕಾಡ್ ನ ಸುಧೀಂದ್ರ ರಾವ್ ಎಚ್.ಕೆ. ಯಾನೆ ಸುಧೀಂದ್ರ, ಸಹಕರಿಸಿದ ಆರೋಪಿಗಳಾದ ತೆಂಕ ಎಕ್ಕಾರು ಗ್ರಾಮದ ಚಿದಾನಂದ, ಎಕ್ಕಾರಿನ ಸೂರಜ್ ಕುಮಾರ್, ದೇಗುಲದ ಪಿ.ಆರ್.ಒ ಬಂಟ್ವಾಳ ತಾಲೂಕು ಅಡ್ಯನಡ್ಕ ಸುರೇಶ್ ಕುಮಾರ್ ಎಂ, ತೆಂಕ ಎಕ್ಕಾರು ಗ್ರಾಮ ದುರ್ಗಾ ನಗರದ ಸದಾಶಿವ ಶೆಟ್ಟಿ ಬಂಧಿತರು. ಆರೋಪಿಗಳಿಂದ ಕದ್ದ ಚಿನ್ನಾಭರಣ ಮಾರಾಟ ಮಾಡಿ ಲಭಿಸಿದ ೪,೨೫,೦೦೦ ರೂ. ನಗದು, ೩ ಗ್ರಾಂ ೯೧೦ ಮಿಲಿ ಗ್ರಾಂ ತೂಕದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಭಾವಚಿತ್ರವಿರುವ ಪೆಂಡೆಂಟ್, ೫ ಮೊಬೈಲ್ ಪೋನ್, ಕೃತ್ಯಕ್ಕೆ ಬಳಸಿದ ಐ-೨೦ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಘಟನೆ ವಿವರ: ವಾಸುದೇವ ಅಸ್ರಣ್ಣರ ಮನೆಗೆ ಅ.೪ರಂದು ಮುಂಜಾನೆ ೭-೮ ಮಂದಿ ಅಪರಿಚಿತರು ರಿವಾಲ್ವರ್ ಮತ್ತು ಮಾರಾಕಾಯುಧಗಳೊಂದಿಗೆ ನುಗ್ಗಿ ಅಸ್ರಣ್ಣ ಅವರ ಪುತ್ರ ಮತ್ತು ಇತರರನ್ನು ಕಟ್ಟಿ ಹಾಕಿ ೮೦ ಪವನ್ ತೂಕದ ಚಿನ್ನಾಭರಣ, ನಗದು ಮತ್ತು ಮೂರು ಮೊಬೈಲ್ ಪೋನ್ ಗಳನ್ನು ದರೋಡೆ ಮಾಡಿದ್ದರು. ಪ್ರಕರಣದ ಪತ್ತೆಗೆ ಸಂಬಂಧಿಸಿ ೪ ತನಿಖಾ ತಂಡಗಳನ್ನು ರಚಿಸಲಾಗಿತ್ತು.
ಸಾಲಬಾಧೆ ದರೋಡೆಗೆ ಕಾರಣ:
ಸುಧೀಂದ್ರ ರಾವ್ ಎಚ್.ಕೆ. ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ಸೂತ್ರಧಾರ . ಉದ್ಯಮಿಯಾಗಿರುವ ಈತ ಒಂದು ಬಾರ್ ನಡೆಸುತ್ತಿದ್ದು, ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರಗಳೂ ಇವೆ. ವಿವಿಧ ಕಡೆ ಸಾಲ ಮಾಡಿದ್ದು, ಸಾಲವನ್ನು ಮರು ಪಾವತಿಸಲಾಗದೆ ಕಂಗಲಾಗಿದ್ದ. ಹೀಗಾಗಿ ಸಾಲ ತೀರಿಸಲು ದರೋಡೆ ಯೋಜನೆ ರೂಪಿಸಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ