ಮಂಗಳೂರು: ದೇಶದ ಪ್ರಥಮ ಪ್ರಧಾನಿ ನೆಹರೂ ಅವರಿಂದ ಮೊದಲ್ಗೊಂಡು ಮನಮೋಹನ್ ಸಿಂಗ್ ವರೆಗಿನ ಎಲ್ಲ ಪ್ರಧಾನಿಗಳು ನುಡಿದಂತೆ ನಡೆದಿದ್ದಾರೆ ಹಾಗೂ ನಡೆದಂತೆ ನುಡಿದಿದ್ದಾರೆ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಮಾತ್ರ ಇದಕ್ಕೆ ಅಪವಾದ. ಕಳೆದ ಎರಡೂವರೆ ವರ್ಷಗಳ ಆಡಳಿತಾವಧಿಯಲ್ಲಿ ಅವರು ತಮ್ಮ ಕಾರ್ಯವೈಖರಿಯನ್ನು ದೇಶಕ್ಕೆ ತೋರಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಟೀಕಿಸಿದ್ದಾರೆ. ಅವರು ಗುರುವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ ವಾಪಸ್ ತಂದು ದೇಶದ ಪ್ರತಿಯೊಬ್ಬನ ಖಾತೆಗೂ 15 ಲಕ್ಷ ರೂ. ನೀಡುವುದಾಗಿ ಕಳೆದ ಲೋಕ ಸಭಾ ಚುನಾವಣೆ ಸಂದರ್ಭ ಮೋದಿ ಅವರು ಭರವಸೆ ನೀಡಿದ್ದು, ಈ ಆಶ್ವಾಸನೆ ಇನ್ನೂ ಈಡೇರಿಲ್ಲ. ಸಂವಿಧಾನ ಎತ್ತಿ ಹಿಡಿದು ಎಲ್ಲ ನಾಗರಿಕರಿಗೂ ಸಮಾನ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಗೋಹತ್ಯೆ ಹೆಸರಿನಲ್ಲಿ ಮುಸ್ಲಿಮರು, ಹಿಂದುಳಿದ ವರ್ಗದವರು, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಈ ಬಗ್ಗೆ ಮೋದಿ ಚಕಾರ ಎತ್ತುತ್ತಿಲ್ಲ. ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.