ಮಂಗಳೂರು: ಮಂಗಳೂರು ಪೊಲೀಸರು ಡ್ರಗ್ ಅಫೆಂಡರ್ ಎಂದು ಪರಿಗಣಿಸಿ ಅ. 3ರಂದು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಿದ್ದ ಆರೋಪಿ ಬಂದರು ಅನ್ಸಾರಿ ರಸ್ತೆ ಸಿ.ಪಿ.ಸಿ. ಕಾಂಪೌಂಡ್ ಬಳಿ ನಿವಾಸಿ ಟಿ.ಪಿ. ರಹೀಂ ಯಾನೆ ಗೂಡ್ಸ್ ರಹೀಂ ಯಾನೆ ಕಿಂಡೀ ರಹೀಂ (41)ನ ಬಂಧನವನ್ನು ಹೈಕೋರ್ಟ್ ಎತ್ತಿಹಿಡಿದಿದೆ.ಹೈಕೋರ್ಟ್ನ ಮೂವರು ನ್ಯಾಯಾಧೀಶರನ್ನೊಳಗೊಂಡ ಸಲಹಾ ಮಂಡಳಿ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ಸಮರ್ಥಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಕಳೆದ 5 ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ಅಮಾಯಕ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು. ಗಾಂಜಾ ಪ್ರಕರಣದ ಆರೋಪಿಯೊಬ್ಬನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದು ಇದೇ ಪ್ರಥಮ. ಈತನ ವಿರುದ್ಧ ಬಂದರು ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಎನ್ಡಿಪಿಎಸ್ ಕಾಯ್ದೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ 5 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, 3 ಪ್ರಕರಣಗಳು ತನಿಖಾ ಹಂತದಲ್ಲಿವೆ.ಆರೋಪಿ ರಹೀಂ ಈ ಹಿಂದೆ ದಾಖಲಾದ ಪ್ರಕರಣಗಳಲ್ಲಿ ಜಾಮೀನು ಪಡೆದು ಯಾವುದೇ ಕಾನೂನು ಕ್ರಮಕ್ಕೂ ಹೆದರದೇ ಗಾಂಜಾ ಮಾರಾಟ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದ.
ಈ ಹಿನ್ನೆಲೆಯಲ್ಲಿ ಈತನನ್ನು ಡ್ರಗ್ ಅಫೆಂಡರ್ ಎಂದು ಪರಿಗಣಿಸಿ ಬಂದರು ಪೊಲೀಸ್ ಠಾಣಾ ನಿರೀಕ್ಷಕ ಶಾಂತಾರಾಮ್, ಎಸಿಪಿ ಕೇಂದ್ರ ಉಪವಿಭಾಗದ ಉದಯ ನಾಯಕ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು ಅವರ ವರದಿಯಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ಆರೋಪಿಯ ವಿರುದ್ಧ ಬಂಧನದ ಆಜ್ಞೆ ಹೊರಡಿಸಿದ್ದರು.