ಮಂಗಳೂರು: ದೇಶದಲ್ಲಿ 500, 1000 ರೂ.ಗಳ ನೋಟನ್ನು ರದ್ದು ಮಾಡುವ ಮೂಲಕ ಹೊಸ ಮನ್ವಂತರ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನೂ ಗೌರವ ಹಾಗೂ ಸ್ವಾಭಿಮಾನದಿಂದ ಬದುಕುವಂತೆ ನರೇಂದ್ರ ಮೋದಿಯವರು ಹೊಸ ಹೆಜ್ಜೆ ಇರಿಸಿದ್ದಾರೆ ಎಂದು ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಅರ್ಥಕ್ರಾಂತಿ ಪ್ರತಿಷ್ಠಾನ ಮಂಗಳೂರು ವತಿಯಿಂದ ಉರ್ವ ಕೆನರಾ ಹೈಸ್ಕೂಲ್ನಲ್ಲಿ ರವಿವಾರ ನಡೆದ "ಅರ್ಥಕ್ರಾಂತಿಗಾಗಿ ವಿನಮ್ರ ಆಗ್ರಹ' ಎಂಬ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.ಅರ್ಥಕ್ರಾಂತಿ ಮೊದಲ ಹೆಜ್ಜೆ ದೇಶದಲ್ಲಿ ಅರ್ಥಕ್ರಾಂತಿ ಆಗಬೇಕಿದೆ.
ಇದರಲ್ಲಿ ಮೊದಲ ಹೆಜ್ಜೆಯಾಗಿ 500, 1,000 ರೂ.ಗಳ ನೋಟು ರದ್ದಾಗಿದೆ. ನಮ್ಮ ಪ್ರಕಾರ 100ರ ನೋಟು ಕೂಡ ರದ್ದಾಗಬೇಕು. ಆರ್ಥಿಕ ತಜ್ಞ ಅನಿಲ್ ಬೋಕಿಲ್ ಪ್ರಕಾರ ದೇಶದ ಒಟ್ಟು ತೆರಿಗೆ ಪದ್ಧತಿಯನ್ನೇ ಸ್ಥಗಿತ ಮಾಡಬೇಕು. ರಸ್ತೆ, ವಾಹನ, ಸಾಮಗ್ರಿ, ಉತ್ಪನ್ನ ಹೀಗೆ ಯಾವುದರ ಮೇಲೆಯೂ ತೆರಿಗೆ ಹಾಕಬಾರದು. ಬ್ಯಾಂಕ್ ವ್ಯವಹಾರಕ್ಕೆ ಮಾತ್ರ ಶೇ. 2ರ ತೆರಿಗೆ ವಿಧಿಸಬೇಕು. ಯಾವುದೇ ರೀತಿಯ ನಗದು ವ್ಯವಹಾರಕ್ಕೆ ತೆರಿಗೆ ಹಾಕಬಾರದು ಹಾಗೂ2,000 ರೂ.ಗಳಿಗಿಂತ ಜಾಸ್ತಿ ಹಣವಿದ್ದರೆ ಅದನ್ನು ಕಾನೂನು ಪರಿಧಿಯೊಳಗೆ ಸೇರಿಸಬಾರದು. ಇಂತಹ ಕ್ರಮಗಳು ದೇಶದಲ್ಲಿ ಜಾರಿಯಾದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಬಲಿಷ್ಠನಾಗುತ್ತಾನೆ ಎಂದರು.