ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಸರ್ಕಾರಿ ಆಸ್ಪತ್ರೆಯ ದಾದಿಯರ ವಸತಿಗೃಹದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ತಾಲೂಕಿನ ಬಾಯಾರುಪದವು ಕ್ಯಾಂಪ್ಕೋ ನಿವಾಸಿ ಇಬ್ರಾಹಿಂ ಮುಝಮ್ಮಿಲ್(೨೦) ಬಂಧಿತ ಆರೋಪಿ. ದಾದಿಯರ ವಸತಿಗೃಹದಿಂದ ೧೪ ಪವನ್ ಚಿನ್ನಾಭರಣ ಕಳವಿಗೈದ ಆರೋಪ ಈತನ ಮೇಲಿದೆ. ಕಳ್ಳತನ ನಡೆಸಿದ ಬಳಿಕ ಈತ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ.
ಸೋಮವಾರ ಊರಿಗೆ ಆಗಮಿಸಿದ್ದ ವೇಳೆ ಕನ್ಯಾನ ಬಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಮಯ ಇನ್ನೊಬ್ಬನ ಸಹಾಯ ಪಡೆದಿದ್ದು, ಹೆಚ್ಚಿನ ಬಂಗಾರವನ್ನು ಈತನ ಕೈಯಲ್ಲಿ ಕೊಟ್ಟಿದ್ದು ತನ್ನಲ್ಲಿ ಕೇವಲ ೧.೫ ಪವನ್ ಚಿನ್ನ ಮಾತ್ರ ಇರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನಲ್ಲಿದ್ದ ಬಂಗಾರವನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.