ಮುಂಬಯಿ, ಡಿ.11: ಮಹಾರಾಷ್ಟ್ರ ರಾಜ್ಯದ ಮಾಜಿ ಶಾಸಕ, ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಮಾಜಿ ಮಹಾಪೌರ (ಮೇಯರ್), ಮುಂಬಯಿ ಪ್ರಸಿದ್ಧ ವೈದ್ಯಾಧಿಕಾರಿ, ಸಮಾಜ ಸೇವಕ, ಶೀವಸೇನಾ ಪಕ್ಷದ ನೇತಾರ, ಡಾ| ರಮೇಶ್ ಯಶವಂತ್ ಪ್ರಭು (78.) ಅವರು ಇಂದಿಲ್ಲಿ ರವಿವಾರ ಮುಂಜಾನೆ (11.12.16) ಅಲ್ಪಕಾಲಿಕ ಅನಾರೋಗ್ಯದಿಂದ ನಿಧನ ಹೊಂದಿದರು.
ಮುಂಬಯಿ ಉಪನಗರದ ವಿಲೇಪಾರ್ಲೆ ಇಲ್ಲಿನ ಹನುಮಾನ್ ನಗರದ ಪ್ರಭುಘರ್ ನಿವಾಸಿ ಆಗಿದ್ದ ಇವರು ಜನಪ್ರಿಯ ವೈದ್ಯಾಧಿಕಾರಿಯಾಗಿ, ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಮೃತರು ಪತ್ನಿ ಎರಡು ಗಂಡು, ಒಂದು ಹೆಣ್ಣು, ಮಾಜಿ ಕಾಂಗ್ರೆಸ್ ಶಾಸಕ ಕೃಷ್ಣ ಎಸ್. ಹೆಗ್ಡೆ (ಅಳಿಯ) ಸೇರಿದಂತೆ ಮತ್ತು ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.
ಶಹಾಜೀ ರಾಜೇ ರಸ್ತೆಯಲ್ಲಿನ ಪ್ರಭೋಧನ್ಕರ್ ಠಾಕ್ರೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಪ್ರಭು ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು ನೂರಾರು ಗಣ್ಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಪೂರ್ವಾಹ್ನ ಅಂಧೇರಿ ಪೂರ್ವದ ಪಾರ್ಸಿವಾಡ ಸ್ಮಶಾನದಲ್ಲಿ ನೇರವೇರಿಸಲ್ಪಟ್ಟಿತು.