ಮುಂಬಯಿ, ಜ.23: ಗೆಜ್ಜೆಗಿರಿ ಕ್ಷೇತ್ರದಲ್ಲಿ ಮೂಲಸ್ಥಾನ ಗರೋಡಿ ನಿರ್ಮಾಣ, ಪುನರುತ್ಥಾನ, ಕ್ಷೇತ್ರಾಭಿವೃದ್ದಿ ಮಾಡುವ ನಿಟ್ಟಿನಲ್ಲಿ ಕೋಟಿ-ಚೆನ್ನಯ ಭಕ್ತರು ಹಾಗೂ ವಿಶ್ವದ ವಿವಿಧ ಬಿಲ್ಲವ ಸಂಘ ಸಂಸ್ಥೆ, ಬಿಲ್ಲವ ಬಾಂಧವರನ್ನು ಒಗ್ಗೂಡಿಸುವ ಹಿತದೃಷ್ಠಿಯಿಂದ ಕಳೆದ ಭಾನುವಾರ ಬಾಳೆಹೊನ್ನೂರು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಸಮಾಲೋಚನ ಸಭೆಯು ನಡೆಸಲ್ಪಟ್ಟಿತು.
ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ ಸುವರ್ಣ ಮಾತನಾಡಿ ಸಮುದಾಯದ ಬಲಾಢ್ಯತೆಗೆ ಏಕತೆಯ ಅವಶ್ಯವಿದೆ. ಬಿಲ್ಲವರು ಎಂದೂ ಸಾಂಘಿಕತೆಯನ್ನು ಮರೆಯದೆ ಒಗ್ಗಟ್ಟಿನಿಂದ ಬಾಳಬೇಕು. ಅವಾಗಲೇ ನಮ್ಮ ಸಾಧನೆಗಳು ಗುರುತರವಾಗಬಲ್ಲವು ಎಂದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕೋಶಧಿಕಾರಿ ದಿಪಕ್ ಕೋಟ್ಯಾನ್ ಅವರು ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ದೇಯಿಬೈದ್ಯೆತಿ-ಕೋಟಿ ಚೆನ್ನಯ, ಗುರು ಸಾಯನ ಬೈದ್ಯರ, ಕ್ಷೇತ್ರದ ಧೈವಿಕ ಶಕ್ತಿಗಳ ಕೆಲವು ವಿಚಾರಗಳನ್ನು ಸಭೆಯಲ್ಲಿ ಪ್ರಸ್ಥಾಪಿಸಿದರು.
ಬಿಲ್ಲವ ಮಹಾಮಂಡಲದ ಜೊತೆ ಕಾರ್ಯದರ್ಶಿ ಡಾ| ರಾಜಶೇಖರ ಆರ್.ಕೋಟ್ಯಾನ್ ಮುಂಬಯಿ ಮಾತನಾಡಿ ಮಾತೆ ದೇಯಿಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಗರೋಡಿ ನಿರ್ಮಾಣ, ಪುನರುತ್ಥಾನ ಕ್ಷೇತ್ರಾಭಿವೃದ್ದಿ ಯನ್ನು ವಿಶ್ವದ ಎಲ್ಲಾ ಬಿಲ್ಲವ ಸಂಘಸಂಸ್ಥೆಗಳು, ಬಿಲ್ಲವ ಬಾಂಧವರು ಒಟ್ಟು ಸೇರಿ ಮಾಡಬೇಕೆಂದು ಕರೆ ನೀಡಿದರು.
ಬಾಳೆಹೊನ್ನೂರು ಬಿಲ್ಲವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಕ್ಕೆ ಸಹಕರಿಸುವುದಾಗಿ ಬರವಸೆ ಕೊಟ್ಟರು. ಹಾಗೂ ಇದೇ ಬರುವ ಫೆಬ್ರವರಿ 19 ತಾರೀಕಿನಂದು ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಾಳೆ ಹೊನ್ನೂರು ಬಿಲ್ಲವ ಬಾಂಧವರು 10 ಬಸ್ಸುಗಳಲ್ಲಿ "ನಮ್ಮ ನಡೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕಡೆಗೆ" ಎನ್ನುವ "ಬೃಹತ್ ವಾಹನ ಜಾಥದ" ಮೂಲಕ ಗೆಜ್ಜೆಗಿರಿ ಕ್ಷೇತ್ರಕ್ಕೆ ಬರುವುದಾಗಿ ಬರವಸೆ ಕೊಟ್ಟರು.
ಸಭೆಯಲ್ಲಿ ಬಾಳೆ ಹೊನ್ನೂರು ಬಿಲ್ಲವ ಸಂಘದ, ಕೊಪ್ಪ ಬಿಲ್ಲವ ಸಂಘದ ಪದಾಧಿಕಾರಿಗಳು, ಗೆಜ್ಜೆಗಿರಿಯ ಸಂತೋಶ್ ಬ್ರಹ್ಮಾವರ, ಹರಿಚ್ಚಂದ್ರ ಕಟಪಾಡಿ, ಹರೀಶ್ ವಿ.ಸಾಲ್ಯಾನ್ ಮುಂಬಯಿ ಮತ್ತಿತರರು ಉಪಸ್ಥಿತರಿದ್ದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕಾರ್ಯಧ್ಯಕ್ಷ ಪಿತಾಂಬರ ಹೆರಾಜೆ ಸ್ವಾಗತಿಸಿದರು. ದೀಪಕ್ ಕೋಟ್ಯಾನ್ ಧನ್ಯವದಿಸಿದರು.