ಮಂಗಳೂರು: ಮನೆಗೆ ನುಗ್ಗಿದ ಕಳ್ಳರು ಮನೆಯ ಕೋಣೆಯ ಕಪಾಟಿನಲ್ಲಿದ್ದ 2.12 ಲಕ್ಷ ರೂಪಾಯಿ ನಗದು ಹಾಗೂ ಮೂರೂವರೆ ಪವನ್ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ದ.ಕ.ಜಿಲ್ಲೆಯ ಉಪ್ಪಿನಂಗಡಿಯಾ ಕೊಯಿಲ ಗ್ರಾಮದ ಆದಂ ಹಾಜಿ ಎಂಬವರ ಮನೆಯಲ್ಲಿ ನಡದಿದೆ. ಆಶ್ಚರ್ಯವೆಂದರೆ ಮುಂಬಾಗಿಲ ಮೂಲಕ ಕಳ್ಳರು ಒಳಪ್ರವೇಶಿಸಿದ್ದರೂ, ಬಾಗಿಲು ಒಡೆದ ಕುರುಹುಗಳೇ ಇಲ್ಲಿ ಕಂಡುಬರುತ್ತಿಲ್ಲ.
ಅದಲ್ಲದೆ, ರೂಂ ಒಳಗಿದ್ದ ಕಪಾಟನ್ನು ಕೂಡಾ ಒಡೆಯದೇ ಕೀಲಿ ಕೈ ಬಳಸಿ ಬಾಗಿಲು ತೆರೆದು ಕಳ್ಳತನ ನಡೆಸಲಾಗಿದೆ. ಕಪಾಟನ್ನು ಇಡಲಾಗಿದ್ದ ಕೋಣೆಯಲ್ಲಿಯೇ ಮನೆಯೊಡತಿ, ಅವರ ಮಗಳು ಹಾಗೂ ಇಬ್ಬರು ನೆಂಟರು ಹೀಗೆ ನಾಲ್ವರು ಮಲಗಿದ್ದರು. ಆದರೂ ಇಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿ ಮೂಡಿಸಿದೆ.ವಾರದ ಹಿಂದೆ ಆದಂ ಹಾಜಿಯವರ ಮಗನ ಮದುವೆ ಸಮಾರಂಭ ನಡೆದಿದ್ದು, ಮಂಗಳವಾರ ಕೂಡಾ ಈ ಮನೆಯಲ್ಲಿ ಮನೆಯವರು, ಬೀಗರು ಸೇರಿ ಒಟ್ಟು 15 ಜನರು ವಾಸ್ತವ್ಯವಿದ್ದರು.
ತಡರಾತ್ರಿ 1 ಗಂಟೆಯವರೆಗೆ ಇವರು ಮನೆಯಲ್ಲಿ ಎಚ್ಚರದಿಂದಿದ್ದು, ಆ ಬಳಿಕ ಮಲಗಿದ್ದರು. ಆದರೆ ನಸುಕಿನ ಜಾವ 4 ಗಂಟೆಗೆ ಆದಂ ಹಾಜಿಯವರ ಮಗ ಬಾತ್ರೂಂಗೆ ಹೋಗಲೆಂದು ಎದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.ಕಳ್ಳತನದ ಸುದ್ದಿ ತಿಳಿದು ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ನೇತೃತ್ವದಲ್ಲಿ ಕಡಬ ಠಾಣಾ ಪೊಲೀಸರು, ಡಿವೈಎಸ್ಪಿ ಭಾಸ್ಕರ ರೈ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.