ಮಂಗಳೂರು: ಅರ್ಜಿ ಸಲ್ಲಿಕೆ ವಿಳಂಬವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ಗೋ ಶಾಲೆಗಳಿಗೆ ರಾಜ್ಯ ಸರಕಾರದಿಂದ ದೊರೆಯಬೇಕಾದ ಅನುದಾನಕ್ಕೆ ಈ ಬಾರಿ ಕತ್ತರಿ ಬಿದ್ದಿದ್ದು, ಈ ಗೋಶಾಲೆಗಳಿರುವ ಗೋವುಗಳ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿರುವ ಮಾನ್ಯತೆ ಪಡೆದಿರುವ ಗೋಶಾಲೆಗಳಿಗೆ ಸರಕಾರದಿಂದ ಅನುದಾನ ನೀಡಲಾಗುತ್ತದೆ. ಅದರಂತೆ ದ.ಕ. ಜಿಲ್ಲೆಯಲ್ಲಿರುವ ಒಟ್ಟು 10 ಗೋಶಾಲೆಗಳಿಗೆ ಸರಕಾರದಿಂದ 2016-17ನೇ ಸಾಲಿಗೆ ಸೂಕ್ತ ಅನುದಾನ ದೊರೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಇಲ್ಲಿವರೆಗೆ ಕೇವಲ ಒಂದು ಗೋಶಾಲೆಗೆ ಮಾತ್ರ ಅನುದಾನ ಲಭಿಸಿದ್ದು, ಉಳಿದ ಗೋಶಾಲೆಗಳಿಗೆ ಅರ್ಜಿ ಸಲ್ಲಿಕೆ ವಿಳಂಬ ಮಾಡಿದ ಕಾರಣ ನೀಡಿ ಅನುದಾನ ತಡೆಹಿಡಿಯಲಾಗಿದೆ.
ಸರಕಾರದಿಂದ ಅನುದಾನ ಕೋರಿ ಜಿಲ್ಲೆಯ 10 ಗೋಶಾಲೆಗಳು ಜ. 21ರೊಳಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಈ ಬಗ್ಗೆ ಜಿಲ್ಲೆ ಗೋಶಾಲೆಗಳ ನಿರ್ವಹಣೆ ನೋಡಿಕೊಳ್ಳುವರಿಗೆ ಸಕಾಲದಲ್ಲಿ ಸರಿಯಾದ ಮಾಹಿತಿ ಲಭ್ಯವಾಗಿರಲಿಲ್ಲ. ಬಳಿಕ ಅಂದರೆ, 2017ರ ಡಿಸೆಂಬರ್ನಲ್ಲಿ ಕರ್ನಾಟಕ ಗೋಶಾಲೆಗಳ ಒಕ್ಕೂಟದ ವತಿಯಿಂದ ಪಶುಸಂಗೋಪನ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಜಿಲ್ಲೆಯಿಂದ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಕೆಲವೊಂದು ಗೊಂದಲವಿತ್ತು. ಸಮಸ್ಯೆ ಬಗೆಹರಿಸಿ ಮತ್ತೆ ಅರ್ಜಿ ಸಲ್ಲಿಸುವಷ್ಟರಲ್ಲಿ ಗಡುವು ಮುಗಿದು ಹೋಗಿತ್ತು.