ಮಂಗಳೂರು: ಎಸ್ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ ಮಹಮ್ಮದ್ ಅಶ್ರಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲ್ನನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು.
ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಭರತ್ ಭಜರಂಗದಳದ ಪುತ್ತೂರು ವಲಯದ ಸಂಚಾಲಕನಾಗಿದ್ದ. ನಿಷೇಧಾಜ್ಞೆ ಇದ್ದ ವೇಳೆಯಲ್ಲೆ ಹತ್ಯೆ ನಡೆದು ವಾತಾವರಣ ಇನ್ನಷ್ಟು ಉದ್ವಿಗ್ನ ಗೊಂಡಿತ್ತು. ಜುಲೈ 2 ರ ವರಗೆ ಬಂಟ್ವಾಳ ಸೇರಿದಂತೆ ಜಿಲ್ಲೆಯ 4 ತಾಲೂಕುಗಳಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಕಲಾಯಿ ನಿವಾಸಿಯಾಗಿದ್ದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್ರರನ್ನು ದುಷ್ಕರ್ಮಿಗಳು ಬೆಂಜನಪದವು ಕರಾವಳಿ ಸೈಟ್ ರಾಮನಗರ ಸಮೀಪ ಜೂನ್ 21 ರಂದು ಹಾಡಹಗಲೆ ತಲವಾರಿನಿಂದ ಕಡಿದು ಹತ್ಯೆಗೈದಿದ್ದರು.ಈ ಘಟನೆಯಿಂದ ದ.ಕ.ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.