ಮಂಗಳೂರು, ಜು.08: ಸಾಮಾಜಿಕ ಕ್ಷೇತ್ರದ ಅತಿ ಗಣ್ಯರಿಗೆ ನೀಡುತ್ತಿರುವ ವಾರ್ಷಿಕ `ಸಂಸ್ಕಾರ ಭಾರತಿ' ಪ್ರಶಸ್ತಿಗೆ ಈ ಬಾರಿ ಐದು ಮಂದಿ ಆಯ್ಕೆಯಾಗಿದ್ದು, ಪಡು ಪೆರಾರದ ಕತ್ತಾಲ್ಸಾರಿನ ಸೂಲಗಿತ್ತಿ (ಜಾನಪದ ಪ್ರಸೂತಿ ತಜ್ಞೆ) ಸುಂದರಿ ಶೆಟ್ಟಿ (89) ಪುರಸ್ಕಾರ ವಿಜೇತರಾದ ಒಬ್ಬ ಗಣ್ಯರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಕುಳಾಯಿಯ ಚಿತ್ರಾಪುರದ `ದ್ವಾರಕಾ' ಹೋಟೆಲ್ ಸಭಾಭವನದಲ್ಲಿ ಜುಲೈ 9ರ ಆದಿತ್ಯವಾರ ನಡೆಯಲಿದೆ. ಪ್ರಶಸ್ತಿ ಮೊತ್ತ ತಲಾ 10,000/ ರೂಪಾಯಿ ಆಗಿದ್ದು, ಇದನ್ನು ನಿಟ್ಟೆ ವಿನಯ ಹೆಗ್ಡೆ ಪ್ರಾಯೋಜಿಸಿದ್ದಾರೆ. ರಾಮ ಸಜಿಪ(ಪಂಬದ), ಅಡ್ಡೂರು ಉಪೇಂದ್ರ ಆಚಾರ್ಯ(ಸ್ವರ್ಣ ಶಿಲ್ಫಿ), ವಿಠಲ ಶೆಟ್ಟಿಗಾರ (ಯಕ್ಷ ಕಲಾವಿದ) ಮತ್ತು ಲೋಕೇಶ್ ಪೂಜಾರಿ (ದೈವ ಪಾತ್ರಿ) ಪ್ರಶಸ್ತಿಗೆ ಆಯ್ಕೆಯಾದ ಉಳಿದ ನಾಲ್ವರು ಗಣ್ಯರಾಗಿದ್ದಾರೆ.
ಸುಂದರಿ ಶೆಟ್ಟಿ :
ಬಜಪೆಗೆ ಹತ್ತಿರದ ಪಡು ಪೆರಾರದ ಕತ್ತಲ್ಸಾರಿನ ಸುಂದರಿ ಶೆಟ್ಟಿ ತನ್ನ ಹಳ್ಳಿ ಹಾಗೂ ಸುತ್ತಲ ಪ್ರದೇಶದಲ್ಲಿ ಸೂಲಗಿತ್ತಿಯಾಗಿ ಈಗಲೂ ಜನಪ್ರಿಯ ಮಹಿಳೆ. ಸುಮಾರು ಐದು ದಶಕ ಬಾಣಂತಿಯರ ಹೆರಿಗೆಗೆ ನೆರವಾಗುತ್ತಿದ್ದ ಶೆಟ್ಟಿ, ಜಾತಿ-ಧರ್ಮ ಲೆಕ್ಕಿಸದೆ ಈ ಕ್ಷೇತ್ರದಲ್ಲಿ ತನ್ನದೇ ಆದ ಜ್ಞಾನದ ಮೂಲಕ ಲೆಕ್ಕವಿಲ್ಲದಷ್ಟು ಮಹಿಳೆಯರಿಗೆ ನೆರವಾಗಿದ್ದಾರೆ. ಕಾರಣ ಸುಂದರಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಯಾರಾದರೂ ಬಂದು ಇವರಲ್ಲಿ ಹೇಳಿದರೆ, ಹಿಡಿದ ಕೆಲಸ ಅಲ್ಲಿಗೆಯೇ ಬಿಟ್ಟು ನಿರ್ದಿಷ್ಟ ಮನೆಗೆ ತೆರಳುತ್ತಿದ್ದರು. ಆ ಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ನಡೆಸಲು ಸಾಧ್ಯವಿಲ್ಲದ ಎಲ್ಲ ಬಡವರ ಸುಂದರಿಯವರ ಸೇವೆಯನ್ನೇ ನಂಬಿದ್ದರು. ಇವರು ತನ್ನ ಕೆಲಸಕ್ಕಾಗಿ ಹೋಗುವ-ಬರುವ ವೆಚ್ಚ ಪಡೆಯುತ್ತಿದ್ದರಷ್ಟೆ. ಅವರ ಸೇವಾವಧಿಯಲ್ಲಿ ಯಾವುದೇ ಮಹಿಳೆ ಹೆರಿಗೆ ಕಷ್ಟಕ್ಕೆ ಸಿಲುಕಿದ್ದಿಲ್ಲ. ಎಲ್ಲಾದರೂ ಸಿಕ್ಕಿದಾಗ ತಮ್ಮ ಶಾಲಾ ಶಿಕ್ಷಕರಿಗೆ ವಿದ್ಯಾರ್ಥಿಗಳು ನೀಡುವ ಗೌರವದಂತೆ, ಸುಂದರಿಯವರ ಶ್ರಮದ ಮೂಲಕ ಈ ಜಗತ್ತು ಕಂಡ ಮಕ್ಕಳು ತಾಯಿಗೆ ಸಮಾನ ಗೌರವ ನೀಡುತ್ತಾರೆ.
ಇವರಿಗೆ ನಾಲ್ವರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ತಾಯಿ ಮೂಲಕವೇ ಸಮಾಜ ಈ ಮಕ್ಕಳನ್ನು ಗುರುತಿಸುತ್ತಿದೆ. ಇದನ್ನು ಮಕ್ಕಳೂ ಪ್ರೀತಿಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ. ಒಬ್ಬ ಪುತ್ರ ಚಿತ್ರಾಪುರದಲ್ಲಿ, ಇನ್ನೊಬ್ಬರು ಗುರುಪುರದಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ತಾಯಿಯ ಬಗ್ಗೆ ಅತೀವ ಪ್ರೀತಿ ವ್ಯಕ್ತಪಡಿಸುವ ಪುತ್ರ ಜಗದೀಶ್ ಶೆಟ್ಟಿ, ಒಂದು ಘಟನೆ ಹಂಚಿಕೊಂಡಿದ್ದು ಹೀಗೆ, `ಒಂದು ಬಾರಿ ಬಜಪೆಯ ಪ್ರಸಿದ್ಧ ಪ್ರಸೂತಿ ತಜ್ಞ ಡಾ| ಗೋಪಿನಾಥ್ ಭಟ್ ಚಿಕಿತ್ಸಾಲಯದಲ್ಲಿ ಹೆರಿಗೆಗಾಗಿ ಮೂವರು ಮಹಿಳೆಯರು ಆಗಮಿಸಿದ್ದರು. ಇನ್ನೇನು ಇವರಿಗೆ ಚಿಕಿತ್ಸೆ ಮುಂದುವರಿಸ ಬೇಕು ಎನ್ನುವಷ್ಟರಲ್ಲಿ ಕಟೀಲಿನ ಆಸ್ರಣ್ಣರಿಗೆ ಅನಾರೋಗ್ಯ ಎಂಬ ಕರೆ ಬಂತು. ಆ ಹೊತ್ತಿಗೆ ಚಿಕಿತ್ಸಾಲಯದಲ್ಲಿದ್ದ ಸುಂದರಿ ಶೆಟ್ಟಿಯೊಂದಿಗೆ ಮಾತುಕತೆ ನಡೆಸಿದ ಡಾ| ಭಟ್, ಕಟೀಲಿಗೆ ಹೋಗಿ ಬರುವವರೆಗೆ ಈ ಮೂವರು ಮಹಿಳೆಯ ಉಪಚಾರ ಮಾಡಿ ಎಂದು ಸೂಚಿಸಿದರು. ಅಚ್ಚರಿಯೆಂದರೆ, ಅವರು ಕಟೀಲಿಗೆ ಹೋಗಿ ಬರುವುದರೊಳಗೆ ಅದಾಗಲೇ ನೋವು ಕಾಣಿಸಿಕೊಂಡಿದ್ದ ಆ ಮೂವರು ಮಹಿಳೆಯರಿಗೆ ಸುಲಲಿತ ಹೆರಿಗೆ ನಡೆಸಿದ್ದರು' ಎಂದರು. ಬಳಿಕ ಇವರ ಜನಪ್ರಿಯತೆ ಹೆಚ್ಚಾಗಿತ್ತು ಮತ್ತು ದೂರದ ಊರುಗಳ ಜನರಿಗೂ ಇವರು ಹೆಚ್ಚು ಆಪ್ತರಾಗಿದ್ದಾರೆ. ಕಳೆದ 10 ವರ್ಷದಿಂದ ವೃದ್ಧಾಪ್ಯದ ಕಾರಣದಿಂದ ಇವರು ಸೂಲಗಿತ್ತಿ ಸೇವೆಯಿಂದ ದೂರು ಸರಿದಿದ್ದಾರೆ.