(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜು.15: ಅದ್ವೈತ ವೇದಾಂತ ತತ್ವಜ್ಞಾನಿ, ಶ್ರೀ ಈಶ್ವರಾನಂದ ಭಾರತೀ ಸ್ವಾಮಿಜಿ ಅವರ ಶಿಷ್ಯ, ಕಾಸರಗೋಡು ಎಡನೀರು ಮಠದ ಶ್ರೀಮದ್ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯ ಥೋಟಕಾಚಾರ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಶ್ರೀಪಾದರು ತಮ್ಮ 57ನೇ ವಾರ್ಷಿಕ ಚಾತುರ್ಮಾಸ್ಯ ವೃತವನ್ನು ಈ ಬಾರಿ ಮುಂಬಯಿ ಅಲ್ಲಿನ ಮಾಟುಂಗಾ ಪೂರ್ವದಲ್ಲಿನ ಶ್ರೀ ಶಂಕರ ಮಠದಲ್ಲಿ ಕೈಗೊಂಡಿದ್ದಾರೆ.
ಮಹಾನಗರ ಮುಂಬಯಿಗೆ ಪುರಪ್ರವೇಶಗೈದ ಶ್ರೀಗಳನ್ನು ನೆರೆದ ಭಕ್ತಾಭಿಮಾನಿಗಳು ಹಾಗೂ ಶಿಷ್ಯರು ಭಕ್ತಿಪೂರ್ವಕವಾಗಿ ಬರಮಾಡಿ ಕೊಂಡರು. ಕಳೆದ ಭಾನುವಾರ (ಜು.09) ಗುರುಪೂರ್ಣಿಮೆಯ ಶುಭಾವಸರದಿ ಶೀಪಾದರು ಯತಿ ಚಾತುರ್ಮಾಸ್ಯಾರಂಭ ಆರಂಭಿಸಿರುವರು.
ಶ್ರೀಗಳು ಬರುವ ಸೆಪ್ಟೆಂಬರ್ 06ರ ಭಾದ್ರಪದ ಹುಣ್ಣಿಮೆಯ ಪ್ರತಿಪತ್ ಶ್ರದ್ಧಾ ದಿನ ಬುಧವಾರ ತನಕ ಶಂಕರ ಮಠದಲ್ಲಿದ್ದು ನಿತ್ಯ ತಮ್ಮ ಆರಾಧನಾ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರನ್ನು ಪೂಜಿಸಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಭಕ್ತರನ್ನು ಹರಸಲಿದ್ದಾರೆ. ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ ಎಂದು ಎಡನೀರು ಮಠದ ವಕ್ತಾರರು ತಿಳಿಸಿದ್ದಾರೆ.