ಮಂಗಳೂರು: ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ವಿತರಣೆ ಕಾರ್ಯ ಮುಂದಿನ ಒಂದು ತಿಂಗಳೊಳಗೆ ಪ್ರಾರಂಭವಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 14.70 ಲಕ್ಷ ಮಂದಿ ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇವುಗಳನ್ನು ಪರಿಶೀಲಿಸಿ ಚೆಕ್ಲಿಸ್ಟ್ ತಯಾರಿಸಿ ಇಲಾಖೆಯ ವೆಬ್ಸೈಟ್ ಮೂಲಕ ಜನಸ್ನೇಹಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಗ್ರಾಮ ಲೆಕ್ಕಿಗರು ಇದರ ಪ್ರತಿಯನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಾರೆ. ಆಧಾರ್ ನಂಬರ್, ಕುಟುಂಬ ನಕ್ಷೆ ಹಾಗೂ ಆದಾಯ ವಾರ್ಷಿಕ 1.20 ಲಕ್ಷ ರೂ. ಇದೆಯೇ ಪರಿಶೀಲಿಸಿ ಖಾತ್ರಿ ಪಡಿಸುತ್ತಾರೆ. ಬಿಪಿಎಲ್ ಪಡಿತರ ಚೀಟಿಗೆ ಇದ್ದ ವಿದ್ಯುತ್ ಬಿಲ್ ಹಾಗೂ ಮನೆ ವಿಸ್ತೀರ್ಣ ಮಾನದಂಡವನ್ನು ಕೈಬಿಡಲಾಗಿದೆ. ಪರಿಶೀಲನೆ ಕಾರ್ಯ 15 ದಿನಗಳೊಳಗೆ ಮುಗಿಯಲಿದ್ದು ಬಳಿಕ ಆಹಾರ ಇಲಾಖೆ ಪಡಿತರ ಚೀಟಿಯನ್ನು ಮುದ್ರಿಸಿ ಸ್ಪೀಡ್ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ತಲುಪಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.