ಮಂಗಳೂರು: ಅವಳಿ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಛೋಟಾ ರಾಜನ್ ಸಹಚರನನ್ನು ಕೊಣಾಜೆ ಪೊಲೀಸರು ಮುಂಬಯಿಯಲ್ಲಿ ವಶಕ್ಕೆ ಪಡೆದು ಕೊಂಡಿದ್ದಾರೆ. ಉಡುಪಿ ಶಿರ್ವ ಮೂಲದ ವಿನೇಶ್ ಶೆಟ್ಟಿ(44) ಬಂಧಿತ ಆರೋಪಿ.
2003ರಲ್ಲಿ ಬಂಟ್ವಾಳ ತಾಲೂಕಿನ ಮುಡಿಪು ಇರಾ ರಸ್ತೆಯ ಮೂಳೂರು ಕ್ರಾಸ್ ಬಳಿ ಕಪ್ಪಕಲ್ಲು ಕೋರೆ ಮಾಲಕ ವೇಣುಗೋಪಾಲ ನಾಯ್ಕ್ ಮತ್ತು ಅವರ ಜೀಪು ಚಾಲಕ ಸಂತೋಷ್ ಕೊಲೆಗೆ ಸಂಬಂಧಿಸಿದಂತೆ ವಿನೇಶ್ ಸಹಿತ ಏಳು ಮಂದಿ ಆರೋಪಿಗಳಿದ್ದಾರೆ.ಅವರಲ್ಲಿ ಐದು ಮಂದಿ ಆರೋಪಿಗಳು ಆರೋಪ ಮುಕ್ತರಾಗಿದ್ದು ವಿನೇಶ್ ಹಾಗೂ ಎರಡನೇ ಆರೋಪಿ ಲೋಕೇಶ್ ಬಂಗೇರ ಜಾಮೀನಿನ ಮೇಲೆ ಬಿಡುಗಡೆಗೊಂಡು ತನಿಖೆ ಎದುರಿಸುತ್ತಿದ್ದರು.
ಕಳೆದ ಎರಡು ವರ್ಷಗಳಿಂದ ಮುಂಬಯಿಯಲ್ಲಿ ಭೂಗತನಾಗಿದ್ದ ವಿನೇಶ್ ಶೆಟ್ಟಿ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿಯಾಗಿತ್ತು. ಮುಂಬಯಿಯ ಥಾಣೆಯ ಕೋರ್ಟ್ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೊರ್ಟ್ಗೆ ಹಾಜರಾಗಲು ಬಂದಿದ್ದ ವಿನೇಶ್ನನ್ನು ಕೊಣಾಜೆ ಪೊಲೀಸರು ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.