ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹಾಗೂ ಆಯುಕ್ತ ಮಹಮದ್ ನಝೀರ್ ಅವರಿಗೆ ಹೈಕೋರ್ಟ್ ತಲಾ 20 ಸಾವಿರ ರೂ. ದಂಡ ವಿಧಿಸಿದೆ. ಮುಂದಿನ ವಿಚಾರಣೆ ವೇಳೆ ಕೋರ್ಟ್ಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಸಲೂನ್ ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ ಸಲೂನ್ ಮಾಲೀಕ ಫ್ರಾನ್ಸಿಸ್ ಕಿರಣ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪಾಲಿಕೆಯ ಆಯುಕ್ತರು ಹಾಗೂ ಮೇಯರ್ ಹಾಜರಾಗಿ ಯಾವ ಆಧಾರದ ಮೇಲೆ ಜಪ್ತಿ ಮಾಡಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶನ ನೀಡಿತ್ತು.ಲೈಸನ್ಸ್ ಪಡೆದಿದ್ದರೂ ಸಲೂನ್ ಜಪ್ತಿ ಮಾಡಲಾಗಿದೆ ಎಂದು ಮಾಲೀಕರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ಕೋರ್ಟ್ ನಿರ್ದೇಶನ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಮೇಯರ್ ಹಾಗೂ ಆಯುಕ್ತರಿಗೆ ತಲಾ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.